ಕೂಡಲಸಂಗಮದ ಮಾದರಿಯಲ್ಲಿ ಸರ್ವಜ್ಞರ ಸಮಾಧಿ ಅಭಿವೃದ್ಧಿ: ಸಚಿವ ಶಿವರಾಜ್ ತಂಗಡಗಿ

Get real time updates directly on you device, subscribe now.

ಬೆಂಗಳೂರು: ಫೆ.20

ಕೂಡಲ‌ ಸಂಗಮದ‌ ಕ್ಷೇತ್ರದ ಮಾದರಿಯಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿರುವ ತ್ರಿಪದಿ ಬ್ರಹ್ಮ ಬಸವಣ್ಣ ಅವರ ಸಮಾಧಿಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ವತಿಯಿಂದ ನಯನ‌ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೀಗಾಲೇ ಇಲಾಖೆ‌ ಅಧಿಕಾರಿಗಳು ಸ್ಥಳಕ್ಕೆ ‌ಖುದ್ದು ಭೇಟಿ ನೀಡಿ ‌ಪರಿಶೀಲನೆ‌ ನಡೆಸಿದ್ದಾರೆ. ಶೀಘ್ರವೇ ಸಮಾಧಿ ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಹಿಂದಿನ‌ ಸರ್ಕಾರ ಸಮಾಧಿ ಅಭಿವೃದ್ಧಿವಲ್ಲ, ಮೂರು ವರ್ಷದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಂದೇ ಒಂದು ಪ್ರಶಸ್ತಿ ಕೊಡುವ ಕೆಲಸ ಮಾಡಿಲ್ಲ. ನಮ್ಮ ಈ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಸರ್ವಜ್ಞ ಅವರ ಸಮಾಧಿ ಅಭಿವೃದ್ಧಿ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂದರು.‌

ಸರ್ವಜ್ಞ ಅವರು ಯಾವುದೇ ಜಾತಿ, ಮತ,‌ ಪಂಥಕ್ಕೆ ‌ಸೇರಿದವರಲ್ಲ. ಜಾತಿ ವ್ಯವಸ್ಥೆ, ಅಸಮಾನತೆ ವಿರುದ್ಧ ಬಸವಣ್ಣ ಅವರಂತೆ 16ನೇ ಶತಮಾನದಲ್ಲಿ ಹೋರಾಡಿದ ಮಹಾನೀಯ ಸರ್ವಜ್ಞ ಎಂದು ಶ್ಲಾಘಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸರ್ವಜ್ಞ ಹೇಳದ ವಿಷಯವಿಲ್ಲ. ಆ ಕಾಲದಲ್ಲಿ ತಾನು ಕಂಡು ಅನುಭವಿಸಿದ ವಿಷಯಗಳ ಬಗ್ಗೆ ದಿಟ್ಟವಾಗಿ ಹೇಳಿದ್ದರು. ವಿದ್ಯೆ, ವಿವೇಕ, ಆಹಾರ,‌‌ ಆರೋಗ್ಯ, ನೀತಿ- ನಿಯಮ, ಗುರು- ಹಿರಿಯರು, ಜಾತಿ ಪದ್ಧತಿ, ಸಾಮಾಜಿಕ ‌ಜೀವನ,‌ ನ್ಯಾಯ- ಅನ್ಯಾಯ ಹೀಗೆ ಹಲವು ವಿಷಯಗಳ ಬಗ್ಗೆ ಯಾವ ಹಂಗೂ ಇಲ್ಲದೆ ಸರ್ವ ಕಾಲಕ್ಕೂ ಅನ್ವಯವಾಗುವ ಸತ್ಯವನ್ನು ತ್ರಿಪದಿಗಳಲ್ಲಿ‌ ಸಾರಿ ಹೇಳಿದ್ದಾರೆ ಎಂದು ಮೆಲಕು ಹಾಕಿದರು.

ಬಸವಣ್ಣ, ಸರ್ವಜ್ಞ ಹಾಗೂ ಅಂಬೇಡ್ಕರ್ ಅವರ ಹಾದಿಯಲ್ಲಿ ನಮ್ಮ ಮುಖ್ಯಮಂತ್ರಿಗಳು ಸಾಗಿದ್ದು,‌
ತುಳಿತಕ್ಕೆ ಒಳಗಾದವರನ್ನು ಮೇಲೇತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಬಡವರು, ದೀನದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ‌ಸಂಸ್ಕೃತಿ ಇಲಾಖೆ‌ ಕಾರ್ಯದರ್ಶಿ ‌ಡಾ.ಎನ್.ಮಂಜುಳಾ, ನಿರ್ದೇಶಕಿ ಡಾ.ಧರಣಿ ದೇವಿ ಮಾಲಗತ್ತಿ, ಜಂಟಿ‌ ನಿರ್ದೇಶಕರಾದ ಬಲವಂತರಾಯ ಪಾಟೀಲ್ , ಬನಶಂಕರಿ ಅಂಗಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: