ಜೈ ಭೀಮ್ ಅಂದ್ರೆ ಸಾಲದು, ಹೃದಯದಲ್ಲಿಯೇ ಸ್ಥಾನ ಕೊಡಬೇಕು : ಗೊಂಡಬಾಳ

Get real time updates directly on you device, subscribe now.

ಕೊಪ್ಪಳ: ಅಂಬೇಡ್ಕರ್ ಅಂದರೆ ಕೇವಲ ಅದೊಂದು ಹೆಸರಲ್ಲ ಸೂರ್ಯ ಪ್ರಕಾಶದ ಶಕ್ತಿ, ಆತನ ಹೆಸರು ಹೇಳಿದರೆ ಸಾಲದು ಹೃದಯದಲ್ಲಿಯೇ ಸ್ಥಾನ ಕೊಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಆಶಯ ವ್ಯಕ್ತಪಡಿಸಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ ೬೭ ನೇ ಮಹಾಪರಿನಿರ್ವಾಹಣ ದಿನದಂದು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ದೇಶದ ಸರ್ವ ಜನಾಂಗದ ಮಹಿಳೆಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಿಳಾವಾದಿ, ಶೋಷಿತರ ಬಾಳಿಗೆ ಬೆಳಕಾದ ನಿಜ ಅರ್ಥದ ಪತ್ರಕರ್ತ, ಸಮಾಜ ಸುಧಾರಣೆಗೆ ಸರ್ವ ಸುಖ ತ್ಯಾಗ ಮಾಡಿದ ಕಾಯಕಯೋಗಿ, ದೇಶ ಸೇವೆಗೆ ಹೆಂಡತಿ ಮಕ್ಕಳನ್ನು ಕಳೆದುಕೊಂಡ ಸತ್ಯಹರಿಶ್ಚಂದ್ರ, ಓದಿಗೆ ಮತ್ತು ಗ್ರಂಥಾಲಯಗಳಿಗೆ ನಾಚಿಕೆ ಬರುವಂತೆ ಓದಿದ ಅತ್ಯದ್ಭುತ ವಿದ್ಯಾರ್ಥಿ, ಹಲವು ಪದವಿ ಪಿ.ಹೆಚ್.ಡಿ ಪಡೆದ ಬ್ಯಾರಿಸ್ಟರ್, ದೇಶದ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಅಂಬೇಡ್ಕರ್ ಅವರು ಮನಸ್ಸು ಮಾಡಿದ್ದರೆ ದೇಶದ ದೊಡ್ಡ ಶ್ರೀಮಂತನಾಗಬಹುದಿತ್ತು ಹಣ, ಅಧಿಕಾರ ಎಲ್ಲವೂ ಸಿಗುತ್ತಿತ್ತು, ಆದರೆ ಅದ್ಯಾವುದರ ಹಿಂದೆ ಹೋಗದ ಮಹಾನ್ ಚೇತನಕ್ಕೆ ಗೌರವ ಕೊಡಬೇಕು, ಆ ಗೌರವ ಅವರ ಆಶಯಗಳಿಗೆ ಬೆಲೆ ಕೊಟ್ಟು ಬದುಕಿದಾಗ ಮಾತ್ರ ಸಾಧ್ಯ, ಅವರನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಕೆಲಸದ ಬಗ್ಗೆ ಗೌರವ ಮತ್ತು ಬೆಲೆ ಇರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ತಿಮ್ಮಾರಡ್ಡಿ ಮೇಟಿ ಅವರು ಅಧ್ಯಕ್ಷತೆವಹಿಸಿ ಮಾತನಾಡುತ್ತ ದೇಶದ ದೊಡ್ಡ ವಿದ್ಯಾವಂತ, ಯಾರಿಂದಲೂ ಆಗದಷ್ಟು ಪದವಿ ಪಡೆದು ಶೈಕ್ಷಣಿಕ ದಾಖಲೆ ಬರೆದ ಅಂಬೇಡ್ಕರ್ ವಿದ್ಯಾರ್ಥಿಗಳಿಗೆ ಆದರ್ಶ ಆಗಬೇಕು ಅವರ ಭಾವಚಿತ್ರವನ್ನು ಅಂಬೇಡ್ಕರ್ ಓದಿದ ವಿದೇಶಿ ಕಾಲೇಜುಗಳ ಗ್ರಂಥಾಲಯ ಗೋಡೆಗೆ ಹಾಕಿರುವದು ಅವರ ಜ್ಞಾನದ ಹಸಿವು ತೋರಿಸುತ್ತದೆ ಎಂದು ಕೊಂಡಾಡಿದರು.
ಅಂಬೇಡ್ಕರ್ ಶ್ರದ್ಧಾಂಜಲಿ ನಿಮಿತ್ಯ ಮೌನಾಚರಣೆ ಮಾಡಿದರು. ಪ್ರಾಧ್ಯಾಪಕಿ ಡಾ. ಭಾಗ್ಯಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು, ಪ್ರಾಧ್ಯಾಪಕಿ ಡಾ. ಟಿ.ವಿ. ವಾರುಣಿ ವಂದಿಸಿದರು.
ಈ ಸಂದರ್ಭದಲ್ಲಿ ಸಿಡಿಸಿ ಸದಸ್ಯರುಗಳಾದ ತೋಟಪ್ಪ ಕಾಮನೂರ ಮತ್ತು ಸಲೀಂ ಅಳವಂಡಿ, ಕಾಲೇಜಿನ ಸಹ ಪ್ರಾಧ್ಯಾಪಕರುಗಳಾದ ಡಾ. ಡಿ. ಹೆಚ್. ನಾಯ್ಕ್, ಶಿವನಾಥ ಈ. ಜಿ., ಗಾಯತ್ರಿ ಭಾವಿಕಟ್ಟಿ, ಸಂತೋಷಕುಮಾರಿ, ಶಿದ್ದಲಿಂಗೇಶ, ಮಂಜುನಾಥ ಆರೆಂಟನೂರ, ಸಿಬ್ಬಂದಿ ರವಿಕಿರಣ ರಾಠೀಡ, ಜಯಪ್ರಕಾಶ ಬಿರಾದಾರ್, ಅನುಶಾ, ನಿಂಗಪ್ಪ ಕೆ. ಇತರರು ಇದ್ದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: