ಸಮಾಜ ಕಟ್ಟುವ ಸಲುವಾಗಿ ವಾಲ್ಮೀಕಿ ಜಾತ್ರೆ ಕಲ್ಪನೆ : ಪ್ರಸನ್ನಾನಂದಪುರಿಶ್ರೀ

ಕೊಪ್ಪಳ: ರಾಜ್ಯದಲ್ಲಿ ನಾಲ್ಕನೆ ಅತೀ ದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ನಾಯಕ ಸಮಾಜವನ್ನು ಕಟ್ಟುವ ಸಲುವಾಗಿ ವಾಲ್ಮೀಕಿ ಜಾಗೃತಿ ಜಾತ್ರೆ ಆರಂಭ ಮಾಡಲಾಗಿದೆ, ಇದು ಇತರರಿಗೂ ಮಾದರಿಯಾಗಿದೆ ಎಂದು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ನಗರದ ವಾಲ್ಮೀಕಿ ಭವನದಲ್ಲಿ ನಡೆದ ವಾಲ್ಮೀಕಿ ನಾಯಕ ಸಮಾಜದ ವಾಲ್ಮೀಕಿ ಜಾತ್ರಾ ವಿಶೇಷ ಸಭೆ ಜಾತ್ರೆ ಸಿದ್ಧತೆ ಸೇರಿ ಹಲವು ವಿಷಯಗಳ ಚರ್ಚೆ ನಡೆಯಿತು. ಈ ವೇಳೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಗಣ್ಯರು, ಮುಖಂಡರು, ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ನಾಯಕ ಸೇರಿ ಪರಿಶಿಷ್ಟ ಪಂಗಡದಲ್ಲಿ ಇರುವ ವಿವಿಧ ಜಾತಿಗಳಿಗೆ ಮೀಸಲಾತಿಯನ್ನು ಶೇ. ೭ಕ್ಕೆ ಹೆಚ್ಚಳ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ ಆದರೆ ಅಲ್ಲಿ ಸೆಡ್ಯುಲ್ ೯ ರ ಸಂವಿಧಾನ ತಿದ್ದುಪಡಿಯ ಅಗತ್ಯವಿದ್ದು ಶೀಘ್ರ ಅದು ಆಗಲಿ ಎಂಬ ಒತ್ತಡವನ್ನು ಹೇರುವದೂ ಸೇರಿದಂತೆ ಸಮಾಜ ಒಂದಾಗುವ ಹಾಗೆ ಮಾಡುವದು ಬಹಳ ಪ್ರಮುಖ ಕೆಲಸವಾಗಿದೆ, ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ವಿಪರೀತವಾಗಿದ್ದು ಅದನ್ನು ತಡೆಯುವ ನಿಟ್ಟನಲ್ಲಿ ನಿರಂತರ ಹೋರಾಟ ಮಾಡಬೇಕಿದೆ ಎಂದರು.
ಪ್ರತಿವರ್ಷದಂತೆ ಜಾತ್ರೆ ೨೦೨೪ ಫೆ. ೮ ಮತ್ತು ೯ ರಂದು ಮಠದಲ್ಲಿ ನಡೆಯಲಿದೆ, ರಾಜ್ಯ ಮತ್ತು ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಲಿದ್ದು, ಸಾಧ್ಯವಾದಷ್ಟು ಎಲ್ಲಾ ವ್ಯವಸ್ಥೆ ಮಾಡಲಾಗುವದು, ಜನರ ಕಾಣಿಕೆಯಿಂದಲೇ ಉತ್ತಮವಾಗಿ ಜಾತ್ರೆ ನಡೆಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪತ್ರಕರ್ತ, ಯುವ ಮುಖಂಡ ಮಂಜುನಾಥ ಜಿ. ಗೊಂಡಬಾಳ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ ಕಳೆದ ಸಾಲಿನ ಲೆಕ್ಕಪತ್ರ ವಿವರ ನೀಡಿದರು, ರವಿ ವಕೀಲ ವಂದಿಸಿದರು.
ಸಭೆಯಲ್ಲಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜಿಲ್ಲಾಧ್ಯಕ್ಷ ಟಿ. ರತ್ನಾಕರ, ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ, ರಾಜ್ಯ ಕಾರ್ಯದರ್ಶಿ ಸುರೇಶ್ ಡೊಣ್ಣಿ, ಜಿ.ಪಂ. ಮಾಜಿ ಅಧ್ಯಕ್ಷ ರಾಮಣ್ಣ ಚೌಡಕಿ, ಯಮನೂರಪ್ಪ ನಾಯಕ, ಬಸವರಾಜ ಶಹಪೂರ, ಗೀತಾ ಮುತ್ತಾಳ, ಸಮಾಜದ ಯುವ ಮುಖಂಡರಾದ ಹನುಮಂತಪ್ಪ ಗುದಗಿ, ಗೋವಿಂದಪ್ಪ ಬಂಡಿ, ಅವಿನಾಳೇಶ ವಾಲ್ಮೀಕಿ, ರಮೇಶ ಗಿಣಗೇರಿ, ನಾಗರಾಜ ಕಗ್ಗಲ್, ಶೇಖರ ಗಿಣಗೇರಿ, ಚನ್ನಪ್ಪ ಹಂಚಿನಾಳ, ಮಂಜುನಾಥ ಪೂಜಾರ, ವಿಜಯಕುಮಾರ, ಹನುಮಂತ ಡಂಬ್ರಳ್ಳಿ ಇತರರು ಇದ್ದರು.
Comments are closed.