ಆಗಸ್ಟ್ 15ರಿಂದ ಕೊಪ್ಪಳದಲ್ಲಿ 10ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ

ಅಭಿಯಾನದ ಅಂಗವಾಗಿ ರೈತರು ಹಾಗೂ ಸಾರ್ವಜನಿಕರಿಗೆ ಒಣ ತೋಟಗಾರಿಕೆ ಬೇಸಾಯ, ಬರ ನಿರ್ವಹಣೆ, ಹೊಸ ತಂತ್ರಜ್ಞಾನಗಳು, ನೂತನ ತಳಿಗಳ ಪರಿಚಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣಿನ ಕಸಿ ಸಸಿಗಳು, ಅಲಂಕಾರಿಕ, ಹೂವಿನ, ತರಕಾರಿ, ಔಷಧೀಯ ಹಾಗೂ ಸಾಂಬಾರು ಸಸ್ಯಗಳನ್ನು ಇಲಾಖೆಯ ನಿಗದಿತ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಈ ಬಾರಿಯ ಸಸ್ಯಸಂತೆಯ ವಿಶೇಷ ಆಕರ್ಷಣೆಯಾಗಿ ಜಗತ್ತಿನ ದುಬಾರಿ ಮಿಯಾಜಾಕಿ ಮಾವಿನ ಕಸಿ ಸಸಿಗಳು ಹಾಗೂ ಮೆಕಡೋನಿಯಾ (Macadamia) ನಟ್ ಕಸಿ ಸಸಿಗಳು ಸೇರಿದಂತೆ ದೇಶಿ-ವಿದೇಶಿ ಅಪರೂಪದ ಹಣ್ಣಿನ ಮತ್ತು ಹೂವಿನ ಸಸಿಗಳನ್ನೂ ಲಭ್ಯವಾಗುವಂತೆ ಮಾಡಲಾಗಿದೆ.
ಇದರ ಜೊತೆಗೆ ಇಲಾಖೆಯ ವಿವಿಧ ಯೋಜನೆಗಳು, ಗುಣಮಟ್ಟದ ಸಸಿಗಳು, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಹನಿ ನೀರಾವರಿ, ಇಸ್ರೇಲ್ ಮಾದರಿಯ ತಂತ್ರಜ್ಞಾನ, ಜೇನು ಸಾಕಾಣಿಕೆ, ಅಣಬೆ ಬೇಸಾಯ, ಮೌಲ್ಯವರ್ಧನೆ, ಕೈತೋಟ, ತಾರಸಿ ತೋಟ, ವರ್ಟಿಕಲ್ ತೋಟ, ತೋಟಗಾರಿಕೆ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ.ವ.), ಕೊಪ್ಪಳ ಅವರನ್ನು 9483284926 ಹಾಗೂ 8660412770 ಸಂಖ್ಯೆಗಳ ಮೂಲಕ ಅಥವಾ ಸಂಬಂಧಿಸಿದ ತಾಲ್ಲೂಕು ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.