ಸಮ ಸಮಾಜ ನಿರ್ಮಾಣದ ದಿವ್ಯ ನೆಲದಲ್ಲಿರುವುದೇ ಒಂದು ಸೌಭಾಗ್ಯ : ಬಿ.ಕೆ.ರವಿ

Get real time updates directly on you device, subscribe now.

ಕೊಪ್ಪಳ: ಜಗಜ್ಯೋತಿ ಬಸವೇಶ್ವರ ನಡೆದಾಡಿದ ಸಮಸಮಾಜದ ಸಿದ್ದಾಂತ, ಅಂತಹ ನಾಡು ನಿರ್ಮಾಣದ ಈ ನೆಲದಲ್ಲಿರುವುದೇ ಒಂದು ಸೌಭಾಗ್ಯ, ಕಲ್ಯಾಣ ಕರ್ನಾಟಕದ ಕೊಪ್ಪಳದ ಸರಕಾರಿ ಕಾಲೇಜಿಗೆ ನ್ಯಾಕ್‌ನಲ್ಲಿ ಎ ಗ್ರೇಡ್ ಬಂದಿರುವದು ಉತ್ತಮ ಸಾಧನೆ, ಇಲ್ಲಿನ ಉಪನ್ಯಾಸಕ ವರ್ಗ, ಆಡಳಿತ ಮಂಡಳಿ ಹಾಗು ವಿದ್ಯಾರ್ಥಿಗಳೂ ಅಭಿನಂದನಾರ್ಹರು ಎಂದು ಕೊಪ್ಪಳ ವಿ.ವಿ. ಉಪಕುಲಪತಿಗಳಾದ ಬಿ.ಕೆ. ರವಿ ಅಭಿಪ್ರಾಯಪಟ್ಟರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೨-೨೩ ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ರೇಂಜರ್‍ಸ್-ರೋವರ್ಸ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ ಅದು ವ್ಯಕ್ತಿಯಲ್ಲಿ ವಿಷಯ ಜ್ಞಾನವನ್ನು ಒಡಮೂಡಿಸುವದರೊಂದಿಗೆ ವರ್ತನೆ, ನಡುವಳಿಕೆ, ಬದುಕುವ ಕಲೆ, ಕೌಶಲ್ಯ, ಮೌಲ್ಯಗಳು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ ನಿರ್ವಹಣೆಯ ಮೌಲ್ಯಗಳನ್ನು ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವನನ್ನಾಗಿಸುವದು ನಿಜವಾದ ಶಿಕ್ಷಣದ ಗುರಿಯಾಗಬೇಕು. ಹೀಗಾಗಿ ವಿದ್ಯಾರ್ಥಿಗಳು ಕೇವಲ ಪದವಿ, ಅಂಕ ಮತ್ತು ಯಾವುದೇ ಶಿಕ್ಷಣ ಪಡೆದರೂ ಸಾಲದು, ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿನ ವಿವಿ ರದ್ದುಗೊಳಿಸಬಾರದು, ನೂತನ ಕಟ್ಟಡಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರಕಾರ ಎಚ್ಚೆತ್ತುಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳು ಬಹಳ ಕ್ರಿಯಾಶೀಲವಾಗಿ ಬದುಕು ರೂಪಸಿಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ನಮ್ಮ ದೇಶದ ನಾಗರಿಕತೆಗೆ ೫೦೦೦ ವರ್ಷಗಳ ಪುರಾತನ ಇತಿಹಾಸವಿದೆ, ಬಸವಣ್ಣನವರ ಕಾಯಕ ನಿಷ್ಠೆ ಕಲ್ಪನೆಗೆ ೯೦೦ ವರ್ಷಗಳು ಗತಿಸಿವೆ, ನಂತರ ಗಂಡುಗಲಿ ಕುಮಾರರಾಮರ, ವಿಜಯನಗರ ಸಾಮ್ರಾಜ್ಯಗಳ ರಾಜರ ಆಳ್ವಿಕೆಗೆ ೮೦೦ ವರ್ಷಗಳ ಇತಿಹಾಸವಿದೆ, ಅದಾದನಂತರ ಬಂದ ಮೊಘಲರು, ಡಚ್ಚರು, ಫ್ರೆಂಚರು, ಆಂಗ್ಲರು ಇವರೆಲ್ಲರ ನಾಲ್ಕು ನೂರು ವರ್ಷಗಳ ದಬ್ಬಾಳಿಕೆ ಸಹಿಸಿಕೊಂಡು ಈಗಲೂ ಗಟ್ಟಿಯಾಗಿ ನಿಂತಿದ್ದೇವೆ ಎಂದರೆ ಇಲ್ಲಿನ ಬಹುತ್ವದ ವಿಚಾರಗಳು ಕಾರಣ, ಶತಮಾನಕ್ಕೊಬ್ಬ ಯುಗಪುರುಷ ದೇಶವನ್ನು ರಕ್ಷಣೆ ಮಾಡಿದ್ದಾನೆ, ಈ ಶತಮಾನಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ನಮಗೆ ಯುಗಪುರುಷರಾಗಿದ್ದಾರೆ, ಅವರು ರಚಿಸಿದ ಸಂವಿಧಾನವೇ ನಮಗೆ ಧರ್ಮ ಅದನ್ನೇ ಭಾರತ ಇಂಡಿಯಾ ಹಿಂದುಸ್ತಾನ ಪಾಲಿಸಿಕೊಂಡು ಹೋದರೆ ಅತ್ಯುತ್ತಮ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಎಲ್ಲರೂ ಎಷ್ಟೆಷ್ಟು ವಿದ್ಯಾವಂತರಾಗುತ್ತಿದ್ದೇವೆ ಅದರಂತೆ ವೃದ್ದಾಶ್ರಮಗಳು, ಅನಾಥಾಶ್ರಮಗಳು ಜಾಸ್ತಿ ಆಗುತ್ತಿವೆ, ಇದು ಆತಂಕಕಾರಿ ಬೆಳವಣಿಗೆ. ಇದಕ್ಕೆಲ್ಲ ವಿದ್ಯಾರ್ಥಿಗಳು ಪಾಠವನ್ನು ಕೇಳುವ ಸಮಯದಲ್ಲಿ ಶಾಲೆಗಳಿಗೆ ಚಕ್ಕರ್ ಹಾಕಿ ಸುತ್ತಾಡಲು ಹೋಗುವುದು, ನೀತಿ ಇಲ್ಲದ ಪಾಠ ಮತ್ತು ಸಂಸ್ಕಾರವಿಲ್ಲದ ಜೀವನ ಮುಖ್ಯ ಕಾರಣ ಎಂದು ಮಾರ್ಮಿಕವಾಗಿ ನುಡಿದರು. ಅದಕ್ಕಾಗಿ ಅಭ್ಯಾಸ ಮಾಡುವಾಗ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬಂಕ್ ಮಾಡದೆ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಿ ಏನೇ ಮಾಡಿ ನೂರ ಪರ್ಸೆಂಟ್ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ಪ್ರೊ. ತಿಮ್ಮಾರಡ್ಡಿ ಮೇಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ವಾರುಣಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸಲಿಂ ಅಳವಂಡಿ, ಶ್ರೀನಿವಾಸ ಪಂಡಿತ್, ತೋಟಪ್ಪ ಕಾಮನೂರು, ಗಂಗಾಧರ ಕಬ್ಬೇರ, ಗೌತಮ್ ಮಾಜಿಸಾ, ಸುಮಂಗಲಾ ನಾಯಕ, ಸಹ ಪ್ರಾಧ್ಯಾಪಕರಾದ ಡಿ.ಹೆಚ್.ನಾಯಕ, ಶಿವನಾಥ, ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಆರೆಂಟನೂರ ಇತರರು ಉಪಸ್ಥಿತರಿದ್ದರು.
ಕು. ಚೈತ್ರಾ ಹಾಗೂ ಅಕ್ಷತಾ ತಂಡದವರು ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ಡಾ. ಭಾಗ್ಯಜ್ಯೋತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮತನಡಿದರು, ಉಪನ್ಯಾಸಕ ಮಹಾಂತೇಶ ನೆಲಾಗಣಿ ಕಾರ್ಯಕ್ರಮ ನಿರ್ವಹಿಸಿದರು, ಸಹ ಪ್ರಾಧ್ಯಾಪಕರಾದ ಗಾಯತ್ರಿ ಬಾವಿಕಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಮೌನೇಶ ದಾಸರ್, ಪ್ರಕಾಶ ಟಿ., ಸಂತೋಷ ಕಾಯಿಗಡ್ಡಿ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಆಟೋಟ ಸ್ಪರ್ಧೆಯ ವಿಜೇತರು, ವಿವಿ ಬ್ಲ್ಯೂ ಆದ ವಿದ್ಯಾರ್ಥಿಗಳಿ ಅಭಿನಂದನಾಪತ್ರ ಹಾಗೂ ಬಹುಮಾನ ನೀಡಲಾಯಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: