ಲ್ಯಾಂಡ್‌ ಲಾರ್ಡ್‌ ಸಿನಿಮಾ ವಿಮರ್ಶೆ : ಕಾಟೇರನ ನೆರಳಿನಲ್ಲಿ ಅದ್ದಿದ, ತಿದ್ದಿದ ರಾಚಯ್ಯ

Get real time updates directly on you device, subscribe now.

//ಲ್ಯಾಂಡ್‌ ಲಾರ್ಡ್‌ ಸಿನಿಮಾ ವಿಮರ್ಶೆ//

ಕಾಟೇರನ ನೆರಳಿನಲ್ಲಿ ಅದ್ದಿದ, ತಿದ್ದಿದ ರಾಚಯ್ಯ

-ಬಸವರಾಜ ಕರುಗಲ್.
ಗುರುಶಿಷ್ಯರು ಸಿನಿಮಾ ಮೂಲಕ ಖೋ ಖೋ ಆಟದ ಕಥೆ ಹೇಳಿದ್ದ ಜಡೇಶ್‌ ಹಂಪಿ ಕಾಟೇರನಲ್ಲಿ ಊಳುವವನೇ ಒಡೆಯನ ಎಳೆ ತಂದಿದ್ದರು. ಲ್ಯಾಂಡ್‌ ಲಾರ್ಡ್‌ ಸಿನಿಮಾ ಹೆಸರು ಕೇಳಿದಾಕ್ಷಣ ಇದೂ ಕಾಟೇರನ ಕಥೆಯಂತೆ ಎಂಬ ಊಹೆ ಸತ್ಯವಾಗಿದ್ದರೂ ಸಂಪೂರ್ಣ ಕಾಟೇರನನ್ನು ಹೋಲುವುದಿಲ್ಲ. ಆದರೆ ಕಾಟೇರನ ನೆರಳಿನಲ್ಲಿ ಅದ್ದಿದ ತಿದ್ದಿದ ರಾಚಯ್ಯನ ರೂಪವೇ ಲ್ಯಾಂಡ್‌ ಲಾರ್ಡ್.‌ ಇಲ್ಲಿ ಸಮಾನತೆ, ಸಂವಿಧಾನದ ಪಾಠ ಮಾಡುವ ಇಚ್ಛೆ ಕಥೆಯಲ್ಲಿ ಕಂಡುಬಂದರೂ ಕಮರ್ಷಿಯಲ್‌ ಅಂಶಗಳು ಇದಕ್ಕೊಂದು ಪೂರ್ಣದಾರಿ ಮಾಡಿಕೊಟ್ಟಿಲ್ಲ. ಅವಕಾಶ ಇದ್ದಲ್ಲೆಲ್ಲ ಸಂವಿಧಾನ, ಸಮಾನತೆಯನ್ನು ಜಡೇಶ್‌ ನಿರ್ದೇಶನದಲ್ಲಿ ಹೇಳಿ ಮುಗಿಸಿದ್ದಾರೆ.

ಎರಡು ತಲೆಮಾರುಗಳ ಕಥೆಯನ್ನು ಸಿನಿಮಾ ಹೊಂದಿದ್ದರೂ ಸ್ವಾತಂತ್ರ್ಯನಂತರದ ಕಾಲಾವಧಿಯ ಗ್ರಾಮೀಣ ಪರಿಸರದ ಕಥೆಯನ್ನು ಸೊಗಸಾಗಿ ಹೆಣೆದಿದ್ದು, ತೋರಿಸಿದ್ದು ಮನಮುಟ್ಟುವಂತಿದೆ. ರಾಮದುರ್ಗದಲ್ಲಿ ಆರಂಭಗೊಂಡ ಕಥೆ ಹುಲಿದುರ್ಗದ ಫ್ಯ್ಲಾಶ್‌ಬ್ಯಾಕ್‌ ಮತ್ತೇ ರಾಮದುರ್ಗದ ಕ್ಲೈಮ್ಯಾಕ್ಸ್‌ನಲ್ಲಿ ಮುಗಿಯುತ್ತದೆ. ಎರಡು ಎಕರೆ ಜಮೀನಿಗಾಗಿ ಒಂದು ತಲೆಮಾರು ಜೀತ ಮಾಡಿದರೂ ಜಮೀನು ದಕ್ಕುವುದಿಲ್ಲ. ಜಮೀನು ಗಳಿಸಿ, ಆ ಜಮೀನಿನಲ್ಲಿ ಎದೆಯಎತ್ತರದ ಬೆಳೆ ಬರುವವರೆಗೆ ಮಾತಿಲ್ಲ ಎಂದು ತಾಯಿ ಮಗನಿಗೆ ಹೇಳುತ್ತಿದ್ದಂತೆ ಸಿನಿಮಾ ಹತ್ತು ವರ್ಷ ಮುಂದಕ್ಕೆ ಹೋಗುತ್ತದೆ. ಅಲ್ಲಿ ತಾಯಿ ಇಲ್ಲ. ಮಗ ಭೀಮನಾಗಿರುತ್ತಾನೆ ಎಂಬ ಕಲ್ಪನೆ, ಅವನು ಮೂಗಬಸವನಂತಗಾಗಿರುವುದನ್ನು ಕಂಡು ಪ್ರೇಕ್ಷಕರಿಗೆ ಕೆಲ ಕಾಲ ಭ್ರಮನಿರಸನವಾಗುತ್ತದೆ. ಅಂಥದ್ದರಲ್ಲಿ ಮಗಳನ್ನು ಓದಿಸಿ ಪೊಲೀಸ್‌ ಕಾನ್‌ಸ್ಟೇಬಲ್‌ ಮಾಡಿ, ಮಗಳು ಅದೇ ಗ್ರಾಮದ ಪೊಲೀಸ್‌ ಠಾಣ ಗೆ ಬಂದಾಗ ತಂದೆಯ ರೂಪದಲ್ಲಿ ಮಗಳನ್ನು ಕಾಣುತ್ತಾನೆ ಪ್ರೇಕ್ಷಕ. ಅವಳಿಗೊಂದು ಲವ್‌, ಪ್ರೀತಿಸಿದ ಹುಡುಗನ ಸಾವು, ಸೇಡು, ಕಾನೂನು, ಶಿಕ್ಷೆ ಹೀಗೆ ಕಥೆ ಸಾಗುತ್ತದೆ. ಕೊನೆಕೊನೆಗೆ ಸಿನಿಮಾಗೆ ಕಮರ್ಷಿಯಲ್‌ ಟಚ್‌ ಕೊಡಬೇಕೆಂಬ ಜಿದ್ದಿನಿಂದಾಗಿ ಚಿತ್ರ ಮುಗಿಯುತ್ತಾ ಬಂದಂತೆ ಕಥೆ ಹಳಿತಪ್ಪಿದಂತಾಗುತ್ತದೆ, ಮುಂದೇನು ಎಂಬ ದೃಶ್ಯಗಳನ್ನು ಪ್ರೇಕ್ಷಕ ಸುಲಭವಾಗಿ ಊಹಿಸುವ ಹಂತ ಬಂದು ಬಿಡುತ್ತದೆ. ಹಾಗೆಂದ ಮಾತ್ರಕ್ಕೆ ಸೀಟಿನ ತುದಿಯಲ್ಲಿ ಕುಳಿತು ನೋಡುವ ಸಿನ್‌ಗಳಿಗೆ ಲ್ಯಾಂಡ್‌ ಲಾರ್ಡ್‌ ಕೊರತೆ ಮಾಡಿಲ್ಲ ಎಂಬುದಂತು ಗ್ಯಾರಂಟಿ.

ಸಿನಿಮಾದುದ್ದಕ್ಕೂ ಕೋಲಾರ ಜಿಲ್ಲೆಯ ತೆಲುಗು ಮಿಶ್ರಿತ ಕನ್ನಡ ಭಾಷೆಯನ್ನ ಬಳಸಿಕೊಂಡದ್ದು ಲ್ಯಾಂಡ್‌ಲಾರ್ಡ್‌ಗೆ ಪೂರಕವಾಗಿದೆ. ಎರಡು ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತ ಸಿನಿಮಾದ ಮತ್ತೊಂದು ಶಕ್ತಿ. ದುನಿಯಾ ವಿಜಯ್‌, ಅವರ ಮಗಳು ರೇತನ್ಯಾ, ರಚಿತಾ ರಾಮ್‌, ಅಚ್ಯುತ್‌ ರಾವ್‌ ಸೇರಿದಂತೆ ಎಲ್ಲರ ಅಭಿನಯ ಸೊಗಸಾಗಿದೆ. ರಾಜ್‌ ಬಿ.ಶೆಟ್ಟಿ ನಿಜಕ್ಕೂ ವಿಲನ್‌ ಆಗಿ ಅಚ್ಚರಿಯ ಅಭಿನಯ ನೀಡಿದ್ದಾರೆ. ಜಡೇಶ್‌ ಹಂಪಿ ಬತ್ತಳಿಕೆಯಲ್ಲಿ ಇನ್ನೂ ಸಾಕಷ್ಟು ಬಾಣಗಳಿವೆ ಎಂಬುದನ್ನು ನಿರೂಪಿಸಿದ ಸಿನಿಮಾ ಲ್ಯಾಂಡ್‌ ಲಾರ್ಡ್.

ಕುಟುಂಬಸಮೇತ, ಮುಜುಗರವಿಲ್ಲದೇ ನೋಡಬಹುದಾದ ಸಿನಿಮಾ ಲ್ಯಾಂಡ್‌ ಲಾರ್ಡ್.‌ ಕಾಟೇರನಿಗೆ ಹೋಲಿಸಿದರೆ ಲ್ಯಾಂಡ್‌ ಲಾರ್ಡ್‌ ರಾಚಯ್ಯ ಚೂರೇ ಚೂರು ಡಲ್ಲು ಅಷ್ಟೇ. ಬಿಟ್ಟರೆ ಕಾಸಿಗಂತು ಮೋಸ ಮಾಡಲ್ಲ ಈ ಲ್ಯಾಂಡ್‌ ಲಾರ್ಡ್.‌

ಪ್ರದರ್ಶನ: ಶ್ರೀ ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ.

Get real time updates directly on you device, subscribe now.

Comments are closed.

error: Content is protected !!