ಮಕ್ಕಳ ಪ್ರತಿಭೆ ಬೆಳಗಲು ವೇದಿಕೆ ಅವಶ್ಯ : ಶರಣಬಸನಗೌಡ ಪಾಟೀಲ್

ಬಹದ್ದೂರಬಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಕೊಪ್ಪಳ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಹೊರ ಬರಲು ಇಂಥ ಪ್ರತಿಭಾ ಕಾರಂಜಿಯಂತ ವೇದಿಕೆಗಳು ತುಂಬಾ ಅವಶ್ಯ ಹಾಗೂ ತುಂಬ ಸಹಕಾರಿಯಾಗಲಿವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್ ಅವರು ಹೇಳಿದರು.

ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಬಹದ್ದೂಬರಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಅವುಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರತಿ ವರ್ಷ ಪ್ರತಿಭಾ ಕಾರಂಜಿಯಂತ ವೇದಿಕೆಗಳನ್ನು ಸೃಷ್ಟಿ ಮಾಡಿ ಮಕ್ಕಳಿಗೆ ವೇದಿಕೆ ಕಲ್ಪಿಸುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯು ನಾಡಿಗೆ ಬೆಳಕಾಗುತ್ತಿವೆ. ಸರ್ಕಾರದಿಂದ ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳಿಗೆ ಅಷ್ಟೊಂದು ಅನುದಾನ ಕೊಡುವುದಿಲ್ಲ. ಸ್ಥಳೀಯ ದಾನಿಗಳ, ಸಂಘ-ಸಂಸ್ಥೆಗಳ ನೆರವಿನ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಅದ್ಭೂತ ಕಾರ್ಯಕ್ರಮ ಮಾಡಿರುವುದು ನಿಜಕ್ಕೂ ಸಂತಸ ತರಿಸಿದೆ. ಇಲ್ಲಿನ ದಾನಿಗಳ ಕಾರ್ಯವೂ ಶ್ಲಾಘನೀಯ ಎಂದರು.
ನಗರ ಪ್ರದೇಶದಲ್ಲಿ ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳಿಗೆ ದಾನ ಕೊಡುವವರ ಸಂಖ್ಯೆಯು ತುಂಬಾ ಕಡಿಮೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳಿಗೆ ಜನರು ಕೊಡುಗೈ ದಾನಿಯಾಗಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿ ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಚರಿಸುತ್ತಾರೆ ಎಂದರು.
ಕೆಓಎಫ್ ಅಧ್ಯಕ್ಷ ಸುರೇಶರಡ್ಡಿ ಮಾದಿನೂರು ಮಾತನಾಡಿ, ನಾನೂ ಸಹ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದ ಹಳೇಯ ವಿದ್ಯಾರ್ಥಿನಿಯಾಗಿದ್ದೇನೆ. ನಮ್ಮೂರಿನಲ್ಲಿ ಮೂರನೇ ಬಾರಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಸಂತಸ ತರಿಸಿದೆ. ಇದೊಂದು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಹಲವು ಶಾಲೆಯ ವಿದ್ಯಾರ್ಥಿಗಳು ಆಗಮಿಸಿರುತ್ತಾರೆ. ಮುಂದಿನ ದಿನದಲ್ಲಿ ದೊಡ್ಡ ಮೈದಾನ ಇರುವ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಿ ಎಂದರಲ್ಲದೇ, ಈ ಶಾಲೆಯಲ್ಲಿ ೫, ೬ ಹಾಗೂ ೭ನೇ ತರಗತಿಯ ವಿದ್ಯಾರ್ಥಿಗಳು ಸರ್ಕಾರಿ ಮೆಡಿಕಲ್ ಸೀಟು ಪಡೆದರೆ ನನ್ನ ತಂದೆ ಸ್ಮರಣಾರ್ಥ ೫೦ ಸಾವಿರ ರೂ. ಆರ್ಥಿಕ ನೆರುವು ನೀಡುವೆ ಎಂದು ಘೋಷಣೆ ಮಾಡಿದರು.
ವಿಕಲಚೇತನರ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಅವರು ಮಾತನಾಡಿ, ಮುದ್ದಾಬಳ್ಳಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಆಯೋಜನೆಗೆ ಗ್ರಾಮಸ್ಥರು ತುಂಬ ಸಹಕಾರ ನೀಡಿ ತನು, ಮನ, ಧನದಿಂದ ಸೇವೆ ಮಾಡಿದ್ದಾರೆ. ಪ್ರತಿಯೊಬ್ಬರು ಒಂದೊಂದು ಜವಬ್ದಾರಿ ನಿರ್ವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂಥ ದಾನಿಗಳ, ಯುವಕ ಬಳಗದ ಸಹಕಾರದಿಂದ ಮಕ್ಕಳ ಹಬ್ಬ ಅದ್ಭುತವಾಗಿದೆ ಎಂದರು.
ಬಹದ್ದೂರ್ ಬಂಡಿ ಕ್ಲಸ್ಟರ್ ಮಟ್ಟದ ಸಿಆರ್ಪಿ ಮುದ್ದು ಬಸಯ್ಯ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಸಣ್ಣ ಹನುಮಪ್ಪ ಹುಳ್ಳಿ, ಶರಣಗೌಡ ಪಾಟೀಲ್, ನಂದಯ್ಯ ಸಸಿಮಠ,
ನಿವೃತ್ತ ಯೋಧರಾದ ಶಿವಮೂರ್ತೆಯ್ಯ ಸೊಪ್ಪಿಮಠ, ವಿರುಪಾಕ್ಷಪ್ಪ ಚಕ್ರಸಾಲಿ, ತಾಪಂ ಮಾಜಿ ಸದಸ್ಯ ರಾಜೀವರಡ್ಡಿ ಮಾದಿನೂರು, ಬಹದ್ದೂಬರಂಡಿ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ, ಹೊಳಿಬಸಯ್ಯ ಕಾಟ್ರಳ್ಳಿಮಠ, ಎಸ್ಡಿಎಂಸಿ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಲವರ್ತಿ, ವಿರುಪಾಕ್ಷಪ್ಪ ಬಾಗೋಡಿ, ಶರಣಪ್ಪ ರಡ್ಡೇರ್, ಯಂಕಪ್ಪ ಚುಕ್ಕನಕಲ್, ದತ್ತು ಕಮ್ಮಾರ, ಮಾರುತಿ ಮ್ಯಾಗಳಮನಿ, ಮರಿಯಪ್ಪ ದೇವರಮನಿ, ವಿರೇಶ ಅರಳಿಕಟ್ಟಿ, ಮಂಜುನಾಥ ಆರೇರ್, ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ರೇಖಾ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕ ಮೊಹ್ಮದ್ ಇಸ್ಮಾಯಿಲ್ ನಿರೂಪಿಸಿದರು. ಸಿಆರ್ಪಿ ಹನುಮಂತಪ್ಪ ಕೆ.ಆರ್.ಕಾರ್ಯಕ್ರಮ ನಿರ್ವಹಿಸಿದರು.