ರೈತರ ನೆರವಿಗೆ ಧಾವಿಸಿ ಡಿಸಿಗೆ ಸಿವಿಸಿ ಮನವಿ

ಕೊಪ್ಪಳ: ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ ಸುತ್ತಮುತ್ತಲಿನ ರೈತರು ಅತಿವೃಷ್ಟಿಯಿಂದ ತೊಂದರೆಗೆಡಾಗಿದ್ದು ಅವರ ನೆರವಿಗೆ ಕೂಡಲೇ ಧಾವಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಅವರು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಅವರು ತಮ್ಮ ಪಕ್ಷದ ನಿಯೋಗದೊಂದಿಗೆ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಜಿಲ್ಲೆಯಾದ್ಯಂತ ವ್ಯಾಪಕವಾದ ಮಳೆ ಹಾಗೂ ಅತಿವೃಷ್ಟಿ ರೈತರಿಗೆ ಹಾನಿ ಉಂಟು ಮಾಡಿದೆ. ಮುಂಗಾರು ಪೂರ್ವದ ದಿನಗಳಲ್ಲಿ ಅಸಮರ್ಪಕ ರಸಗೊಬ್ಬರ ಪೂರೈಕೆಯ ವಿರುದ್ಧ ಕೊಪ್ಪಳದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಿದರು.
ಈ ಸಲ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ರೈತರ ಜಮೀನಲ್ಲಿ ನೀರು ನಿಂತು ಬೆಳೆ ಹಾಳಾಗಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳದ ಬೆಳೆ ನೀರಿನಿಂದಾವೃತವಾಗಿದೆ.
ರೈತರು ಕೃಷಿ ಭೂಮಿಯನ್ನು ಸ್ವಚ್ಛಗೊಳಿಸಿ ಪರ್ಯಾಯ ಕೃಷಿಯಲ್ಲಿ ತೊಡಗುವ ಆಲೋಚನೆಯಲ್ಲಿದ್ದಾರೆ.
ಸಾಲ ಮಾಡಿ ಬೀಜ ಹಾಗೂ ರಸಗೊಬ್ಬರ ಖರೀದಿಸಿದ ರೈತರು ಈಗ ಬೀದಿಗೆ ಬಂದಿದ್ದಾರೆ. ಸಕಾಲದಲ್ಲಿ ನೆರವು ಸಿಗದಿದ್ದರೆ ರೈತರು ಗುಳೆ ಹೋಗಬಹುದು; ಸಾಲದ ಸುಳಿಗೆ ಸಿಲುಕಬಹುದು; ಇಲ್ಲವೇ ಆತ್ಮಹತ್ಯೆಯಂತಹ ಮಾರ್ಗ ತುಳಿಯಬಹುದು ಎಂದು ಮನವಿ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಳೆ ಹಾನಿ ಕುರಿತು ವ್ಯಾಪಕವಾದ ಸಮೀಕ್ಷೆ ಕೈಗೊಳ್ಳಬೇಕು. ಸಂಬಂಧಪಟ್ಟ ವಿಮಾ ಕಂಪನಿಗಳಿಗೆ ರೈತರಿಗೆ ಪರಿಹಾರ ನೀಡುವಂತೆ ಸೂಚಿಸಬೇಕು. ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ
ತಂಡವನ್ನು ರಚಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕು.
ಬೇರೆ ಬೆಳೆಯ ಕೃಷಿಯಲ್ಲಿ
ತೊಡಗಬಯಸುವ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.
ನಿಯೋಗದಲ್ಲಿ ಪಕ್ಷದ ಜಿಲ್ಲಾ ವಕ್ತಾರರಾದ ಮಲ್ಲನಗೌಡ ಕೋನನಗೌಡ್ರು, ತಾಲೂಕು ಘಟಕದ ಅಧ್ಯಕ್ಷರಾದ ವೀರೇಶಗೌಡ ಚಿಕ್ಕಬಗನಾಳ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಜಡಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮೈತ್ರಿ ಪಕ್ಷ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್ ಹಾಗೂ ರಾಷ್ಟ್ರೀಯ ಪರಿಷತ್ ಸದಸ್ಯರಾದ ಬಸವರಾಜ್ ಕ್ಯಾವೆಟರ್ ಉಪಸ್ಥಿತರಿದ್ದರು.
Comments are closed.