ಬಸಾಪೂರ ಕೆರೆ ತೆರವಿಗೆ ಜನಜಾನುವಾರು ಹೋರಾಟ ಯಶಸ್ವಿ 

Get real time updates directly on you device, subscribe now.

ಎತ್ತು ದನ ಕರು ತಂದು ಪ್ರತಿಭಟನೆ | ಶೀಘ್ರ ೪೦ ಸಾವಿರ ಜಾನುವಾರುಗಳೊಂದಿಗೆ ಬಲ್ಡೋಟಾ ಕೆರೆಗೆ ಮುತ್ತಿಗೆ
ಕೊಪ್ಪಳ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಮುಂದುಗಡೆ ಜನಜಾನುವಾರು ಹೋರಾಟ ಹಮ್ಮಿಕೊಳ್ಳಲಾಗಿತ್ತು, ಜಿಲ್ಲಾಡಳಿತದ ಅನುಮತಿ ಸಿಗದ ಹೊರತಾಗಿಯೂ ಜಾನುವಾರುಗಳನ್ನು ಬಲ್ಡೋಟಾ ಒಳಗಡೆ ಕಳುಹಿಸುವ ಮೂಲಕ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿತು.
ತಾಲೂಕಿನ ಬಸಾಪೂರ ಗ್ರಾಮದ ಸ.ನಂ. ೧೪೩ರ ೪೪.೩೫ ಎಕರೆ ವಿಸ್ತೀರ್ಣದ ಸಾರ್ವಜನಿಕ ಕೆರೆಯನ್ನು ಅತಿಕ್ರಮಿಸಿ, ಕಂಪೌಂಡ್ ನಿರ್ಮಿಸಿ, ರಸ್ತೆ ಬಂದ್ ಮಾಡಿರುವ ಬಲ್ದೋಟಾ ಕಂಪನಿ ಮೇಲೆ ಕ್ರಮ ಜರುಗಿಸಿ, ಕಂಪೌಂಡ್ ತೆರವುಗೊಳಿಸುವಂತೆ ಮನವಿ ಕೊಡಲಾಗಿತ್ತು, ಆದರೆ ತೆರವುಗೊಳಿಸದ ಜಿಲ್ಲಾಡಳಿತ ವಿರುದ್ಧ ಜನಜಾನುವಾರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬಲ್ದೋಟಾ ಕಂಪನಿ ಆರಂಭದಿಂದಲೂ ಆಕ್ರಮಣಕಾರಿ ನೀತಿಯನ್ನು ಅನುಸರಿಸಿ ರೈತರ ಮೇಲೆ ದೌರ್ಜನ್ಯದಿಂದ ಭೂಮಿ ವಶಪಡಿಸಿಕೊಂಡಿದೆ, ಹಿಂದಿನ ಕೆಲವು ಅದಿಕಾರಿಗಳು ಸಹ ಅದಕ್ಕೆ ಸಾಥ್ ನೀಡಿದ್ದು, ಜನರ ಪ್ರಾಣ ಮತ್ತು ಬದುಕು ಮುಖ್ಯವಾಗಿರುವ ಕಾರಣ ಬೆಲೆ ಬಾಳುವ ಹಾಗೂ ಜನ ಜಾನುವಾರುಗಳಿಗೆ ಅವಶ್ಯವಿರುವ ಕೆರೆಯನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವಂತೆ ಉಚ್ಛನ್ಯಾಯಾಲಯದ ತೀರ್ಪು ಇದ್ದಾಗ್ಯೂ ಸಹ ತೆರವುಗೊಳಿಸದಿರುವ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿಗಳು, ಸಚಿವ ಶಾಸಕರು ಕೆರೆ ವೀಕ್ಷಣೆಗೆ ಮತ್ತು ಬಾಧಿತ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಸಾಪುರ ಸ.ನಂ. ೧೪೩ರ ೪೪.೩೫ ಎಕರೆ ಕೆರೆ (ತಲಾಬ) ಸಾರ್ವಜನಿಕರ ಬಳಕೆಗೆ ಮುಕ್ತವಾಗಿಡಬೇಕೆಂದು, ಸಂಪರ್ಕ ರಸ್ತೆ ಬಂದ್ ಮಾಡಿ ನಿರ್ಮಿಸಿದ ಕಂಪೌಂಡ್ ತೆರವುಗೊಳಿಸಬೇಕೆಂದು, ಕೆರೆ ಏರಿಗೆ ನೇರವಾಗಿ ಮುಖ್ಯದ್ವಾರದ ಗೇಟ್ (ಆರ್ಚ್) ಅಳವಡಿಸಿ, ಕಂಪನಿಯ ಭಾರಿ ವಾಹನ ಟಿಪ್ಪರಗಳ ಓಡಾಟದಿಂದ ಮಾಡುತ್ತಿದ್ದು, ಸುಗಮವಾಗಿ ಜನ-ಜಾನುವಾರುಗಳು ಹೋಗಿ ಬರಲು ಆಗುತ್ತಿಲ್ಲ, ಆದ್ದರಿಂದ ಈ ಗೇಟ್ ತೆರವು ಮಾಡಬೇಕೆಂದು, ಕೆರೆಯ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ಸುಮಾರು ೧೦-೧೫ ಎಕರೆ ಕೆರೆಯನ್ನು ಮುಚ್ಚಿ ರಸ್ತೆ ಮಾಡಿದ್ದನ್ನು ತೆರವುಗೊಳಿಸಬೇಕೆಂದು, ಕೆರೆ ಸರ್ವೆ ಮಾಡಿ, ಹದ್ದುಬಸ್ತ್ ಮಾಡಿ ತಾವೇ ನಿರ್ವಹಣೆ ಮಾಡಬೇಕೆಂದು, ಕಂಪನಿ ಜೊತೆ ಮಿಲಾಪಿಯಾಗಿ ಸಾರ್ವಜನಿಕರ ಹಕ್ಕನ್ನು ದಿಕ್ಕರಿಸುವ ವರದಿ ನೀಡಿರುವ ನಿಮ್ಮ ಅಧೀನ ಅಧಿಕಾರಿಗಳ ಮೇಲೆ ಉನ್ನತಾಧಿಕಾರಿಗಳ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತ ಪರವಾಗಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಮನವಿ ಸ್ವೀಕರಿಸಿ ಕ್ರಮದ ಭರವಸೆ ನೀಡಿದರು. ಹೋರಾಟಗಾರರು ಕಾರ್ಖಾನೆ ಒಳಗಡೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರೂ ಸಹ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವದಾಗಿ ಹೇಳಿ ಹೊರಟರು.
ಈ ಸಂದರ್ಭದಲ್ಲಿ ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಕೆ. ಬಿ. ಗೋನಾಳ, ಬಸವರಾಜ ಶೀಲವಂತರ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಎಸ್. ಎ. ಗಫಾರ್, ಭೀಮಸೇನ ಕಲಕೇರಿ, ಕನಕಪ್ಪ ಪೂಜಾರ, ಲಿಂಗರಾಜ ನವಲಿ, ಗಾಳೆಪ್ಪ ಮುಂಗೋಲಿ, ಮಂಗಳೇಶ ರಾಠೋಡ, ಕಾಶಪ್ಪ ಚಲುವಾದಿ, ಶರಣು ಶೆಟ್ಟರ್, ಮಂಜುನಾಥ ಕವಲೂರ, ಯಮನೂರಪ್ಪ ಹಾಲಳ್ಳಿ, ಪ್ರಕಾಶ ಎಂ, ಭೀಮಪ್ಪ, ಸುಂಕಪ್ಪ ಮೀಸಿ, ಶಿವಪ್ಪ ಹಡಪದ. ಹನುಮೇಶ, ಭರಮಪ್ಪ, ಮಾರುತಿ, ಯಮನೂರಪ್ಪ, ಮೂಕಪ್ಪ ಬಸಾಪೂರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!