ಕಾರ್ಖಾನೆ ವಿರುದ್ಧದ ಹೋರಾಟ : ಜನಪ್ರತಿನಿಧಿಗಳು, ಶ್ರೀಗಳ ಭೇಟಿಗೆ ನಿರ್ಧಾರ
ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಮತ್ತು ಹತ್ತಿರದಲ್ಲಿ ಪ್ರಸ್ತುತ ಬಂದಿರುವ ಬಲ್ಡೋಟಾ ಕಾರ್ಖಾನೆ ಮತ್ತು ಕಿರ್ಲೋಸ್ಕರ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲೆಯ ಜನಪ್ರತಿನಿಧಿಗಳನ್ನು ಮತ್ತು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಹೋರಾಟಕ್ಕೆ ದಿನಾಂಕ ನಿರ್ಧರಿಸಲು ಸಭೆ ಒಮ್ಮತ ವ್ಯಕ್ತಪಡಿಸಿತು. ನಗರದ ಪ್ರವಾಸಿ ಮಂದಿರ (ಐಬಿ) ದಲ್ಲಿ ಜಂಟಿ ಕ್ರಿಯಾ ವೇದಿಕೆ ಪೂರ್ಣ ಪ್ರಮಾಣದ ಸಭೆಯಲ್ಲಿ ನಿರ್ಧರಿಸಿತು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಪ್ರತಿದಿನ ಒಬ್ಬ ಪ್ರಮುಖ ಜನಪ್ರತಿನಿಧಿಯನ್ನು ಭೇಟಿ ಮಾಡಿ ಸ್ಪಷ್ಟ ನಿಲುವು ಪಡೆದುಕೊಂಡು ಹೋರಾಟಕ್ಕೆ ದಿನಾಂಕ ನಿಗದಿ ಮಾಡಲಾಗುತ್ತದೆ. ಕಾರ್ಖಾನೆಗಳು ಅನೇಕ ನಿಯಮವನ್ನು ಮೀರಿ ಲಕ್ಷಾಂತರ ಜನರಿಗೆ ಸಮಸ್ಯೆ ಮಾಡಿವೆ. ಅದರಿಂದ ಪರಿಸರದ ನಾಶ, ವಾಯು ಶುದ್ಧತೆಯ ನಾಶ, ನೀರಿನ ಸಮಸ್ಯೆ, ಅಂತರ್ಜಲ ಸಮಸ್ಯೆ ಜೊತೆಗೆ ಇತರೆ ಸಮಸ್ಯೆಗಳು ಬರುತ್ತಿದ್ದು, ಆರೋಗ್ಯಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ ಎಂಬುದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟು ಜನರ ಬಳಿ ಹೋಗಲು ತೀರ್ಮಾನ ಮಾಡಲಾಗಿದೆ. ವಿಸ್ತರಣೆ ಅನುಮತಿ ವಾಪಸ್ ಪಡೆಯಬೇಕು ಎಂದು ಮನವಿ ಮಾಡುವದು ನಂತರ ಹೋರಾಟಕ್ಕೆ ಕೈ ಜೋಡಿಸಲು ಕೋರುವಸು. ಇದೇ ವೇಳೆ ಮಾತನಾಡಿದ ಪ್ರಮುಖರು ಇಲ್ಲಿನ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಸ್ಥಳಿಯರ ಜೀವನ ಹಾಳು ಮಾಡುತ್ತಿದ್ದಾರೆ, ಉದ್ಯೋಗದ ಹೆಸರಲ್ಲಿ ಜನರ ಬದುಕು ಹಾಳಾಗುತ್ತಿದೆ ಎಂದರು. ಕಾನೂನು ಹೋರಾಟ, ರಾಜಕೀಯ ಹೋರಾಟ, ಜನಸಂಗ್ರಾಮ ಹೀಗೆ ನಾನಾ ಬಗೆಯ ಹೋರಾಟಕ್ಕೆ ಚಿಂತನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ. ಬಿ. ಗೋನಾಳ, ಮಹಾಂತೇಶ ಕೊತಬಾಳ, ಸೋಮರಡ್ಡಿ ಅಳವಂಡಿ, ಮಂಜುನಾಥ ಜಿ. ಗೊಂಡಬಾಳ, ರಾಜು ಬಾಕಳೆ, ಡಿ. ಎಂ. ಬಡಿಗೇರ, ಶರಣು ಗಡ್ಡಿ, ಡಾ. ಮಂಜುನಾಥ ಸಜ್ಜನ್, ಶರಣು ಶೆಟ್ಟರ್, ಮುದುಕಪ್ಪ ಹೊಸಮನಿ, ಎಸ್. ಎ. ಗಫಾರ್, ಗವಿಸಿದ್ದಪ್ಪ ಹಲಗಿ, ರವಿ ಕಾಂತನವರ, ಪರಮೇಶರಡ್ಡಿ ಹ್ಯಾಟಿ, ಹನುಮಂತಪ್ಪ ಗೊಂದಿ, ಮಲ್ಲಪ್ಪ ಬಂಡಿ, ಶಾಂತಪ್ಪ ಅಂಗಡಿ ಇತರರು ಇದ್ದರು. ಸಂಸದ ಕೆ. ರಾಜಶೇಖರ ಹಿಟ್ನಾಳ ಅವರ ಭೇಟಿ ಜೂನ್ 20 ರಂದು ಮಧ್ಯಾಹ್ನ 2 ಗಂಟೆಗೆ ಪ್ರವಾಸಿ ಮಂದಿರದಲ್ಲಿ ನಿಗದಿ ಮಾಡಲಾಗಿದೆ.
Comments are closed.