ಕೊಪ್ಪಳಕ್ಕೆ ಕೇಂದ್ರದ ಯೋಜನೆ ಮಂಜೂರು ಮಾಡಿಸಿ: ಸಿವಿಸಿ ಮನವಿ
ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಮಂಜೂರು ಮಾಡಿಸಿಕೊಡಬೇಕೆಂದು ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಸಚಿವ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದರು.
ರವಿವಾರ ಪಟ್ಟಣಕ್ಕೆ ಹೆಲಿಕಾಫ್ಟರ್ ನಲ್ಲಿ ಆಗಮಿಸಿದ ಸಚಿವರನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಬರಮಾಡಿಕೊಂಡು ಸಿ ವಿ ಚಂದ್ರಶೇಖರ್ ಮನವಿ ಸಲ್ಲಿಸಿದರು.
“ತಾವು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ರೈತರ ಬೆಳೆ ಸಾಲ ಮನ್ನಾ ಮಾಡಿದಿರಿ. ಆ ಯೋಜನೆಯ ಅತಿ ಹೆಚ್ಚು ಪ್ರಯೋಜನ ಪಡೆದಿದ್ದು ಕೊಪ್ಪಳ ಜಿಲ್ಲೆಯ ರೈತರು. ಅವರು ಇಂದಿಗೂ ತಮ್ಮನ್ನು ಗೌರವ ಪೂರಕವಾಗಿ ನೆನೆಯುತ್ತಾರೆ. ಕೊಪ್ಪಳದ ಜನತೆಗೆ ತಮ್ಮ ಬಗ್ಗೆ ವಿಶೇಷ, ಪ್ರೀತಿ, ಗೌರವ ಅಭಿಮಾನವಿದೆ. ಜಿಲ್ಲಾ ಕೇಂದ್ರವಾಗಿ ೨೫ ವರ್ಷ ಕಳೆದರೂ ಕೊಪ್ಪಳ ಅಭಿವೃದ್ಧಿ ಹೊಂದಿಲ್ಲ. ಕೇಂದ್ರದಲ್ಲಿ ತಾವು ಪ್ರಭಾವಿ ಸಚಿವರು. ಹೀಗಾಗಿ ಕೊಪ್ಪಳಕ್ಕೆ ವಿವಿಧ ಖಾತೆಗಳ ವಿವಿಧ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಬೇಕು,” ಎಂದು ಒತ್ತಾಯಿಸಿದರು.
ಕೊಪ್ಪಳ ನಗರಕ್ಕೆ ನವೋದಯ ಶಾಲೆ, ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು,
ತೋಟಗಾರಿಕಾ ಬೆಳೆಗಳಿಗೆ ಶೀತಲೀಕರಣ ಘಟಕ, ಸ್ಕಿಲ್ ಇಂಡಿಯಾ ಸೆಂಟರ್ ಹಾಗೂ ಸುಸಜ್ಜಿತ ಕ್ರೀಡಾ ತರಬೇತಿ ಸಂಕೀರ್ಣ ಯೋಜನೆಗಳನ್ನು ಕೇಂದ್ರ ಸರಕಾರದಿಂದ ಮಂಜೂರು ಮಾಡಿಸಿಕೊಡಬೇಕು. ಜೊತೆಗೆ
ಕೋಳೂರು ಕಾಟ್ರಳ್ಳಿಯಲ್ಲಿ ನಿರ್ಮಾಣದ ಹಂತದಲ್ಲಿರುವ ಶ್ರೀ ಗವಿಮಠದ ಗುರುಕುಲ ಉಚಿತ ವಸತಿ ನಿಲಯ ಯೋಜನೆಗೆ ವಿಶೇಷ ಅನುದಾನ ಒದಗಿಸಿ ಕೊಡಬೇಕು. ಈ ಎಲ್ಲಾ ಯೋಜನೆಗಳು ಬಡ ಹಾಗೂ ಮಾಧ್ಯಮ ಕುಟುಂಬದವರ ಭವಿಷ್ಯದ ಭರವಸೆಗಳು. ಕೊಪ್ಪಳವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಮಾಡಲು ಪೂರಕವಾಗುತ್ತವೆ ಎಂದು ಒತ್ತಿ ಹೇಳಿದರು.
“ಕೇಂದ್ರದ ವಿವಿಧ ಖಾತೆಗಳ ಸಚಿವರ ಜೊತೆಗೆ ವೈಯಕ್ತಿಕವಾಗಿ ಮಾತನಾಡಿ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಕೊಪ್ಪಳವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಪರಿವರ್ತಿಸಲು ಅಗತ್ಯವಿರುವ ಸಹಕಾರವನ್ನು ನೀಡುತ್ತೇನೆ,” ಎಂದು ಸಚಿವರು ಭರವಸೆ ನೀಡಿದರು.
Comments are closed.