ಸಿ.ಎಸ್ ದ್ವಾರಕನಾಥ್ MLC ಸ್ಥಾನಕ್ಕೆ ನಾಮನಿರ್ದೇಶನ ಆಗಲಿ: ಶಿವರಾಜ್ ಮೋತಿ
ಬೆಂಗಳೂರು ಫೆ.04: ವಿಧಾನ ಪರಿಷತ್ನ ತೆರವಾದ ನಾಲ್ಕು ಸ್ಥಾನಗಳಲ್ಲಿ, ಒಂದು ಸದಸ್ಯ ಸ್ಥಾನಕ್ಕೆ ಅಲೆಮಾರಿ ಸಮುದಾಯಗಳ ಗಟ್ಟಿಧ್ವನಿ, ಸಾಹಿತಿ, ಓಬಿಸಿ ಆಯೋಗದ ಮಾಜಿ ಅಧ್ಯಕ್ಷ, ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು, ಹಿರಿಯ ವಕೀಲರು, ಕಾಂಗ್ರೆಸ್ ಮುಖಂಡರು ಡಾ. ಸಿ.ಎಸ್.ದ್ವಾರಕನಾಥ್ ಅವರನ್ನು ಈ ಸಲ ಕಾಂಗ್ರೆಸ್ ಪಕ್ಷ ನಾಮನಿರ್ದೇಶನಗೊಳಿಸಿ ಅಲೆಮಾರಿಗಳ ರಾಜಕೀಯ ಅಸ್ಮಿತೆಗಾಗಿ ಮೇಲ್ಮನೆಯ ಮೂಲಕ ರಾಜಕೀಯದ ಪ್ರಾತಿನಿಧ್ಯದ ಅರಿವು ನೀಡಿದ್ದೇವೆ ಎಂದು ಕಾಂಗ್ರೆಸ್ ಈ ಮೂಲಕ ಹಮ್ಮುನಿಂದ ಬೀಗಿಕೊಳ್ಳಲಿ ಎಂದು ಬರಹಗಾರ, ಯುವ ವಕೀಲ ಶಿವರಾಜ್ ಮೋತಿ ಅಭಿಪ್ರಾಯಪಟ್ಟರು.
ಸಿ. ಎಸ್ ದ್ವಾರಕಾನಾಥ್ ಅವರು ಕಳೆದ ನಲವತ್ತು ವರ್ಷಗಳಿಂದ ಜನಪರ ಸಂಘಟನೆಗಳ, ಚಳುವಳಿಗಳ ಜೊತೆಗೆ ಈ ನೆಲದ ಸಂಕಟಗಳ ಬಗ್ಗೆ ನಿರ್ಗತಿಕ, ತಬ್ಬಲಿ ಅಲೆಮಾರಿಗಳ ಉದ್ಧಾರಕ್ಕಾಗಿ ಅವರೂ ಈ ದೇಶದ ಪ್ರಜೆಗಳು ಪಶುಗಳಲ್ಲ ಎಂದು ಚಿಂತಿಸಿ ಸದಾ ಬರೆದು ಮಾತನಾಡುತ್ತಿರುವವರು. ಸ್ವತಃ ಹಿಂದುಳಿದ ಬಲಿಜ(ಕಮ್ಮ) ಜನಾಂಗಕ್ಕೆ ಸೇರಿದವರಾದರೂ ನಿಷ್ಠುರತೆಯ ಇವರು ಕೋಲಾರದವರು. ಅಲೆಮಾರಿಗಳಿಗೆ ಗುರುತು ಕೊಟ್ಟ, “ದ್ವಾರಕನಾಥ್ ಮೊದಲು ಕೋಲಾರದಲ್ಲಿ ಅಹಿಂದ ಸಂಘಟನೆ ಮಾಡಿದ್ದು, ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದು ಎಂದು ಸ್ವತಃ ಇಂದಿನ ಮುಖ್ಯಮಂತ್ರಿಗಳಾದ ಅದೇ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದು ಗಮನಾರ್ಹ ಸಂಗತಿ” ಲಂಕೇಶ್ ಪತ್ರಿಕೆಯಲ್ಲಿದ್ದಾಗ ಇಪ್ಪತ್ತು ವರ್ಷಗಳ ಕಾಲ ಕಾಂಗ್ರೆಸ್ನ ಕಡು ಟೀಕಾಕಾರ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮೂರು ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆಯಾಗಿ, ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯಾದ್ಯಂತ ಟೊಂಕಕಟ್ಟಿ ಸುತ್ತಿ ಅಲೆಮಾರಿ, ಬುಡಕಟ್ಟು, ಆದಿವಾಸಿ ಒಟ್ಟಾರೆ ಅಲ್ಲಲ್ಲಿ ಸಣ್ಣಸಣ್ಣದಾಗಿ ಛಿದ್ರವಾಗಿ ಒಡೆದುಹೋಗಿರುವ ನಿರ್ಗತಿಕ ಅಲೆಮಾರಿಗಳ ಕೇರಿಗೆ ತೆರಳಿ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಶ್ರಮ ಹಾಕಿ ಅತ್ಯಂತ ಯಶಸ್ವಿಯಾಗಿದ್ದಾರೆ ಎಂದರು.
ಯಾವುದೇ ವಿಷಯದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ, ಲಂಕೇಶ್ ಪತ್ರಿಕೆಯ ಛಾಪನ್ನು ಇಂದಿಗೂ ಯುವ ಸಮುದಾಯಕ್ಕೆ ಪರಿಚಯಿಸುತ್ತಿರುವ ಸಾಲಿನಲ್ಲಿ ಇವರು ಒಬ್ಬರು. ಸಾಮಾಜಿಕ ನ್ಯಾಯದ ಪರ ಧೃಡವಾಗಿ ನಿಂತಿರುವ, ಮಾತನಾಡುವ ತಳ ಸಮುದಾಯಗಳ ಮುನ್ನೆಲೆಗಾಗಿ ಶ್ರಮಪಟ್ಟ ಧೀಮಂತ ನಾಯಕ ಅಷ್ಟೇ ಅಲ್ಲ, ಅಲೆಮಾರಿಗಳ ಆರಾಧ್ಯದೈವ ಕೂಡ ಆಗಿದ್ದಾರೆ. ಸವಲತ್ತು ಒದಗಿಸಲು ಅಧಿಕಾರಿಗಳ ಮೊರೆ ಹೋಗಲು ಅನಿವಾರ್ಯ ಎಂದರಿತು “ಕರ್ನಾಟಕ ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾ” ಸ್ಥಾಪಿಸಿ ಅದರ ಮೂಲಕ ಇಡೀ ರಾಜ್ಯಾದ್ಯಾಂತ ರಚನಾತ್ಮಕವಾಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅತ್ಯಂತ ಕಟ್ಟಕಡೆಯ ಸಮುದಾಯಗಳ ಪಾಲಿನ ಪೋಷಕ ಎಂದು ಇವರನ್ನು ಪ್ರಗತಿಶೀಲ ಚಳುವಳಿಕಾರರು ಬಣ್ಣಿಸಿದ್ದಾರೆ ಎಂದು ತಿಳಿಸಿದರು.
ಈ ರಾಜ್ಯದಲ್ಲಿ ಧ್ವನಿಯೇ ಇಲ್ಲದ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಶೋಷಿತ ವರ್ಗದ ಪರವಾಗಿ ದೊಡ್ಡ ಪ್ರಮಾಣದ ಧ್ವನಿಯಾಗಿ ನಿಲ್ಲುತ್ತಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಇಂತಹ ಮಹನೀಯರಿಗೆ ಸೂಕ್ತ ಸ್ಥಾನಮಾನ ನೀಡಿ ಗೌರವಿಸುವುದು, ಪ್ರಾತಿನಿಧ್ಯ ಒದಗಿಸುವುದು ಅನಿವಾರ್ಯ ಹಾಗಾಗಿ ಸಿ. ಎಸ್ ದ್ವಾರಕನಾಥ್ ಅವರಿಗೆ ಪಕ್ಷದಲ್ಲಿ ವಿಶೇಷ, ಉನ್ನತವಾದ ವಿಧಾನ ಪರಿಷತ್(MLC) ಸದಸ್ಯರನ್ನಾಗಿ ಮಾಡಬೇಕೆಂದು ಈ ಮೂಲಕ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಲ್ಲಿ ಪ್ರಜ್ಞಾವಂತ, ಪ್ರಗತಿಶೀಲ ಅಲೆಮಾರಿ ಯುವಕನಾಗಿ ಮನವಿ ಮಾಡುವುದು ನನ್ನ ಕರ್ತವ್ಯ ಎಂದು ಶಿವರಾಜ್ ಮೋತಿ ಹೇಳಿದರು.