ನಗರ ಮೂಲಸೌಕರ್ಯಕ್ಕೆ ಸ್ಪಷ್ಟ ಕಾಯಕಲ್ಪಕ್ಕೆ ಜ್ಯೋತಿ ಮನವಿ

ಕೊಪ್ಪಳ : ಕಾಂಗ್ರೆಸ್ ನೇತೃತ್ವದ ನಗರಸಭೆಗೆ ನೂತನವಾಗಿ ಆಯ್ಕೆಯಾದ ಹಿರಿಯ ಸದಸ್ಯ ನೂತನ ಅಧ್ಯಕ್ಷ ಅಮ್ಜದ್ ಪಟೇಲ್ ಮತ್ತು ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ ಅವರಿಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದ್ದಾರೆ.
ಅವರು ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಮಾಡಿ ಮನವಿ ಮಾಡಿದ್ದಾರೆ.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಶ್ರಮದಿಂದ ಹಲವು ತಿಂಗಳಿನಿಂದ ಖಾಲಿ ಇದ್ದ ನಗರಸಭೆಗೆ ಅಲ್ಪಸಂಖ್ಯಾತರು ಮತ್ತು ಲಿಂಗಾಯತರಿಗೆ ಅವಕಾಶ ಸಿಕ್ಕಿದೆ, ಇರುವ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಪಕ್ಷಕ್ಕೆ ಕೀರ್ತಿ ತರುವಂತಾಗಬೇಕು. ವಿಶೇಷವಾಗಿ ನಗರಸಭೆಗೆ ಮೂಲಸೌಕರ್ಯಗಳ ನಿರ್ಮಾಣದ ದೊಡ್ಡ ಜವಾಬ್ದಾರಿ ಇದೆ. ನಗರದ ಗದಗ ಹೊಸಪೇಟೆ ಮುಖ್ಯ ರಸ್ತೆಯ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಮಹಿಳೆಯರ ಮೂತ್ರಾಲಯ ಇಲ್ಲ, ಸ್ವಚ್ಛತೆ ಬೇಕಿದೆ, ಕುಡಿಯುವ ನೀರು ಮತ್ತು ಬೀದಿ ದೀಪ ವ್ಯವಸ್ಥೆ ಸರಿ ಮಾಡಬೇಕು. ಹಲವು ರಸ್ತೆಗಳನ್ನು ಶಾಸ್ವತವಾಗಿ ರಿಪೇರಿ ಮಾಡಬೇಕು, ರಾಜಕಾಲುವೆಗೆ ಮುಕ್ತಿ ಕೊಡಬೇಕು ಜೊತೆಗೆ ಕಿಡದಾಳ ರೈಲ್ವೆ ಗೇಟ್ನಿಂದ ಕಿಮ್ಸ್ ಮೆಡಿಕಲ್ ಕಾಲೇಜಿನವರೆಗೆ ಬೀದಿ ದೀಪಗಳನ್ನು ತುರ್ತಾಗಿ ಅಳವಡಿಸಬೇಕಿದೆ, ಅಲ್ಲಿ ತಡರಾತ್ರಿ ಪಾಳಯದಲ್ಲಿ ಮಹಿಳೆಯರು ವೈದ್ಯ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಕ್ಬರ್ ಪಾಶಾ ಪಲ್ಟನ್, ವಿಶಾಲಾಕ್ಷಿ ತಾವರಗೇರಾ, ಸುಮಂಗಲಾ ಗಿಣಗೇರಿ, ಸೌಭಾಗ್ಯಲಕ್ಷ್ಮೀ ಗೊರವರ, ವಿರುಪಾಕ್ಷಯ್ಯ ಗದುಗಿನಮಠ, ಲಕ್ಷ್ಮಣ ಮಾದಿನೂರ, ಜಾಂಗೀರ್ ಬಂಡಿಹರ್ಲಾಪೂರ, ಮಂಜುನಾಥ ಜಿ. ಗೊಂಡಬಾಳ, ಶೇಖರ್ ಗಿಣಗೇರಿ ಇತರರು ಇದ್ದರು.
Comments are closed.