ಶಾಲಾ ಪೂರ್ವ ಶಿಕ್ಷಣ ಪದ್ದತಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ: ಡಿಸಿ ನಲಿನ್ ಅತುಲ್
ಶಾಲಾ ಪೂರ್ವ ಶಿಕ್ಷಣ ಪದ್ಧತಿಯಲ್ಲಿ 06 ತಿಂಗಳಿನಿAದ 06 ವರ್ಷದೊಳಗಿನ ಮಗುವನ್ನು ಒಳಪಡಿಸಲಾಗುತ್ತದೆ. ಔಪಚಾರಿಕ ಶಿಕ್ಷಣಕ್ಕಿಂತ ಮೊದಲು ಮಕ್ಕಳಲ್ಲಿ ಶಿಕ್ಷಣ, ಶಾಲೆಯ ಕುರಿತು ಆಸಕ್ತಿ ಬೆಳೆಸಲು ಈ ಪದ್ದತಿ ಸಹಕಾರಿಯಾಗುತ್ತದೆ. ಮಕ್ಕಳಿಗೆ ಬಣ್ಣಗಳು, ಆಕೃತಿಗಳು, ಮರ ಗಿಡಗಳ ಪರಿಚಯ, ಆಟ, ಹಾಡು, ಕಥೆಗಳ ಮೂಲಕ ಮಕ್ಕಳಿಗೆ ಜ್ಞಾನವನ್ನು ನೀಡಲಾಗುತ್ತದೆ. ಇದರಲ್ಲಿ ಪಾಲಕರನ್ನು ಸಹ ಭಾಗಿಯಾಗಿಸುತ್ತಿದ್ದು, ಮಕ್ಕಳ ಸಾಮರ್ಥ್ಯ, ಅವಶ್ಯಕತೆಗಳ ಬಗ್ಗೆ ಪಾಲಕರಿಗೆ ತಿಳುವಳಿಕೆ ನೀಡಲಾಗುತ್ತದೆ. ಔಪಚಾರಿಕ ಶಿಕ್ಷಣಕ್ಕೆ ಮಗು ಕಾಲಿಡುವಾಗ ಯಾವುದೇ ಭಯ, ಆತಂಕವಿಲ್ಲದೆ ಶಾಲೆಗೆ ತೆರಳಲು ಮಾನಸಿಕವಾಗಿ ಮಕ್ಕಳನ್ನು ಅಂಗನವಾಡಿಗಳಲ್ಲೇ ಸಿದ್ದಪಡಿಸಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಶಾಲಾ ಪೂರ್ವ ಶಿಕ್ಷಣ ಪದ್ದತಿಯನ್ನು ಅಧ್ಯಯನ ಮಾಡಲು ಬೇರೆ ರಾಜ್ಯ, ಜಿಲ್ಲೆಗಳಿಂದ ಕಾರ್ಯದರ್ಶಿಗಳು, ಅಧಿಕಾರಿಗಳು, ನಿಯೋಗಗಳನ್ನು ರಚಿಸಿಕೊಂಡು ಜಿಲ್ಲೆಗೆ ಆಗಮಿಸಿ, ಅಧ್ಯಯನ ಮಾಡಿ ತಮ್ಮ ಜಿಲ್ಲೆ, ರಾಜ್ಯದಲ್ಲಿಯೂ ಅಳವಡಿಸಲು ಮುಂದಾಗಿವೆ. ಈ ಯೋಜನೆಯು ದೇಶಕ್ಕೆ ಮಾದರಿಯಾಗಿದೆ. ಇಂತಹ ಯೋಜನೆಗಳ ಫಲಾನುಭವಿಗಳಾದ ಅಂಗನವಾಡಿ ಮಕ್ಕಳು ತಮ್ಮ ಕಲೆ, ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳ ಹಬ್ಬ ಒಂದು ಉತ್ತಮ ವೇದಿಕೆಯಾಗಿದ್ದು, ನಮ್ಮ ಯೋಜನೆ ಸಾರ್ಥಕತೆ ಪಡೆದಿದೆ ಎಂಬ ಹೆಮ್ಮೆ ನಮಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಹುಟ್ಟಿದ ಪ್ರತಿ ಮಗುವಿನಲ್ಲಿ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ. ಇದರಲ್ಲಿ ಪೋಷಕರ, ಶಿಕ್ಷಕರ ಪಾತ್ರ ಬಹುಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಶಾಲಾ ಪೂರ್ವ ಶಿಕ್ಷಣ ಪದ್ದತಿಯು ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವೇದಿಕೆ ಕುರಿತಾಗಿ ಭಯ ಹೋಗಲಾಡಿಸಿ, ತಮ್ಮ ಪ್ರತಿಭೆ ಅನಾವರಣಕ್ಕೆ ಪೂರಕವಾಗಿ ಮಕ್ಕಳ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತದೆ. ಇಂದಿನ ಮಕ್ಕಳ ಹಬ್ಬದಲ್ಲಿ ಅಂಗನವಾಡಿಯ ಮಕ್ಕಳು ಪ್ರಸ್ತುತ ಪಡಿಸುವ ನೃತ್ಯ, ನಾಟಕಗಳಲ್ಲಿ ಅವರ ಪ್ರತಿಭೆ ಕಾಣುತ್ತದೆ. ಪೋಷಕರು ಮಕ್ಕಳಿಗೆ ಓದಿನ ಬಗ್ಗೆಯೇ ಹೆಚ್ಚಿನ ಒತ್ತಡ ಹಾಕದೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರಿನ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ಮಾತನಾಡಿ, ಪೋಷಕರು ಮಕ್ಕಳನ್ನು ಅಂಕಗಳಿಗೆ ಸೀಮಿತಗೊಳಿಸಬೇಡಿ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರ ಆಯ್ಕೆಯ ಕ್ಷೇತ್ರದಲ್ಲಿ ಮಕ್ಕಳು ಮುಂದುವರೆಯಲು ಅವಕಾಶ ಕಲ್ಪಿಸಿಕೊಡಿ. ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳನ್ನು ಪ್ರೋತ್ಸಾಹಿಸಿ. ಮಕ್ಕಳಿಗೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಮುಂದುವರೆಯುವ ಹಕ್ಕಿದೆ. ಅವರ ಆಯ್ಕೆಯ ಕ್ಷೇತ್ರದ ಸಾಧಕ-ಬಾಧಕಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಜವಾಬ್ದಾರಿ ಪೋಷಕರದು. ಬರೀ ಶಿಕ್ಷಣವನ್ನು ನೀಡುವುದು ಮಾತ್ರ ಪೋಷಕರ, ಶಿಕ್ಷಕರ ಜವಾಬ್ದಾರಿಯಲ್ಲ. ಬದಲಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ತಹಶೀಲ್ದಾರ ವಿಠ್ಠಲ್ ಚೌಗಲಾ, ತಾಲ್ಲೂಕು ಪಂಚಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಯಲ್ಲಮ್ಮ, ಜಯಶ್ರೀ, ಬೆಟದಪ್ಪ, ನಿರೂಪಣಾಧಿಕಾರಿಗಳಾದ ಗಂಗಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸರ್ಕಾರಿ ಬಾಲಕರ ಬಾಲ ಮಂದಿರ, ಬಾಲಕಿಯರ ಬಾಲ ಮಂದಿರ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಉಪಸ್ಥಿತರಿದ್ದರು. ಅಂಗನವಾಡಿ ಹಾಗೂ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
Comments are closed.