ಆರ್ಯವೈಶ್ಯ ವಕೀಲರ ಪ್ರಥಮ ರಾಜ್ಯ ಮಟ್ಟದ ಸಮಾವೇಶ ಇಂದು ಕೊಪ್ಪಳದಲ್ಲಿ

ಕರ್ನಾಟಕ ಆರ್ಯವೈಶ್ಯ ವಕೀಲರ ಪ್ರಥಮ ರಾಜ್ಯ ಮಟ್ಟದ ಸಮಾವೇಶ ಹಾಗೂ ಹಿರಿಯ ವಕೀಲರಿಗೆ ಶ್ರೀವಾಸವಿ ಕಾನೂನು ಸಿರಿ ಪ್ರಶಸ್ತಿ ಪ್ರದಾನ ಮತ್ತು ಎಲ್ಲ ಆರ್ಯವೈಶ್ಯ ವಕೀಲರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಕರ್ನಾಟಕ ಆವೋಪಾಗಳ ಒಕ್ಕೂಟದ ವತಿಯಿಂದ ಫೆಬ್ರವರಿ 1ರಂದು ಕೊಪ್ಪಳದ ಶ್ರೀಮತಿ ಭಾಗ್ಯಮ್ಮ ಭೀಮಸೇನಪ್ಪ ಪಾನಘಂಟಿ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಭಾಗ್ಯನಗರದ ಶ್ರೀ ಶಂಕರಾಚಾರ್ಯ ಮಠದ ಶ್ರೀ ಶಿವರಾಮಕೃಷ್ಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಆವೋಪಾಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಎಲ್. ಕೋರಾ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಹಾಗೂ ಹಿರಿಯ ವಕೀಲ ಕೆ.ಎಂ. ದ್ವಾರಕನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ಮೊದಲ ಅವಧಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕಾನೂನು ಹಾಗೂ ನ್ಯಾಯದ ಭವಿಷ್ಯ ವಿಷಯದ ಕುರಿತು ಡಾ. ಪ್ರಸನ್ನಕುಮಾರ ದರೋಜಿ ಉಪನ್ಯಾಸ ನೀಡಲಿದ್ದು, ಎರಡನೇ ಅವಧಿಯಲ್ಲಿ ಸೈಬರ್ ಸುರಕ್ಷತೆ ಮತ್ತು ಸಾಮಾಜಿಕ ಜೀವನ ವಿಷಯದ ಕುರಿತು ನಿವೃತ್ತ ಪ್ರಾಚಾರ್ಯ ಡಾ. ಬಿ.ಜಿ. ಪಾಟೀಲ್ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ದಾನಿಗಳಿಗೆ ಸನ್ಮಾನ, ಹಿರಿಯ ವಕೀಲರಿಗೆ ಪ್ರಶಸ್ತಿ ಪ್ರದಾನ ಹಾಗೂ ಎಲ್ಲ ಆರ್ಯವೈಶ್ಯ ವಕೀಲರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.