ಮುಂದುವರೆದ ಅಭಯ ಹಸ್ತ ಅಭಿಯಾನ: ಜಿಲ್ಲಾ ಉಸ್ತುವಾರಿ ಸಚಿವರಿಂದ ಅಹವಾಲು ಸ್ವೀಕಾರ
ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ‘ಅಭಯ ಹಸ್ತ’ ನಿಮ್ಮ ಬಳಿಗೆ ನಾವು ಅಭಿಯಾನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಡಿಸೆಂಬರ್ 21ರಂದು ಸಹ ಮುಂದುವರೆಸಿದರು.
ಕನಕಗಿರಿ ವಿಧಾನಸಭಾ ಕ್ಷೇತ್ರದ ಬೆನ್ನೂರ ಮತ್ತು ಉಳೇನೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಈಳಿಗನೂರ ಕ್ಯಾಂಪ್, ಈಳಿಗನೂರ, ಜಮಾಪುರ, ಉಳೇನೂರ, ಬೆನ್ನೂರ, ಶಾಲಿಗನೂರ, ಕಕ್ಕರಗೋಳ ಮತ್ತು ನಂದಿಹಳ್ಳಿಯಲ್ಲಿ ಸಂಚರಿಸಿದ ಸಚಿವರು ಆಯಾ ಕಡೆಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಈ ವೇಳೆ ಮಾತನಾಡಿದ ಸಚಿವರು, ‘ಸರ್ವರಿಗೂ ಸಮಬಾಳು’ ಎನ್ನುವ ತತ್ವ ನಮ್ಮದು. ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಆಡಳಿತ ಕೇಂದ್ರ ಗ್ರಾಮ ಪಂಚಾಯತಗಳಿಗು ಹೆಚ್ಚಿನ ಅನುದಾನ ಲಭಿಸಿ ಪ್ರತಿಯೊಂದು
ಹಳ್ಳಿಯು ಮೂಲಭೂತ ಸೌಕರ್ಯದೊಂದಿಗೆ ಅಭಿವೃದ್ದಿ ಹೊಂದಬೇಕು ಎಂಬುದು ನಮ್ಮ ಮೂಲ ಆಶಯವಾಗಿದೆ. ಈ ನಿಟ್ಟಿನಲ್ಲಿ ಶ್ರೀಸಾಮಾನ್ಯರ ಏಳ್ಗೆಯನ್ನು ಗುರಿಯಾಗಿಸಿಕೊಂಡು
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನ ಭಾಗ್ಯದಂತಹ ನಾನಾ ಯೋಜನೆಗಳಿಂದ ಪ್ರತಿಯೊಂದು ಮನೆಗೆ ಪ್ರತಿ ಮಾಹೆ ಸಾವಿರಾರು ರೂಪಾಯಿಗಳ ಸರ್ಕಾರದ ಸಹಾಯಧನ ಅನುದಾನ ಸಿಗುವಂತಾಗಿದೆ ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಜನತೆಗೆ ಮಾತುಕೊಟ್ಟಂತೆ ನಾನು ಕನಕಗಿರಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಸಂಚರಿಸಿ ಜನರ ಅಹವಾಲುಗಳನ್ನು ಆಲಿಸುತ್ತಿದ್ದೇನೆ. ‘ನಿಮ್ಮ ಬಳಿಗೆ ನಾವು’ ಎನ್ನುವ ಅಭಿಯಾನದಡಿ ಜನರ ಅಹವಾಲುಗಳನ್ನು ಆಲಿಸಿ ಜನರು ತಿಳಿಸುವ ಬೇಡಿಕೆಗಳಿಗೆ ಸ್ಪಂದನೆ ನೀಡುತ್ತಿದ್ದೇನೆ. ಕೆಲವು ಬೇಡಿಕೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗುತ್ತಿದೆ. ಕೆಲವು ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಿ ಪರಿಹಾರ ಕಲ್ಪಿಸಲು ಕ್ರಮ ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ಗ್ರಾಮಗಳಲ್ಲಿ ಸಿಸಿ ರಸ್ತೆ: ಅವಶ್ಯಕತೆ ಇರುವ ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಡ್ರೈನೇಜ್ ನಿರ್ಮಾಣಕ್ಕೆ ಪ್ರಸ್ತಾವಣೆ ಸಲ್ಲಿಸಲು ಪಂಚಾಯತ್ ರಾಜ್ಯ ಎಂಜಿನಿಯರ್ ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದ್ದು ಅನುದಾನ ನಿಗದಿಪಡಿಸಿ ಕೆಲಸ ಆರಂಭಿಸುವುದಾಗಿ ಹೇಳಿದರು.
ವಿವಿಧೆಡೆ ಅಭಿವೃದ್ದಿ ಕಾಮಗಾರಿ: ಉಳೇನೂರ-ಸಿದ್ದಾಪುರ ರಸ್ತೆ ದುರಸ್ತಿಗೆ 5 ಕೋಟಿ ಅನುದಾನ ನಿಗದಿಪಡಿಸಿ ಅಭಿವೃದ್ಧಿಪಡಿಸಲಾಗುತ್ತದೆ. ಕೆಕೆಆರ್ಡಿಬಿಯಿಂದ 85 ಲಕ್ಷ ರೂ. ಅನುದಾನ ನಿಗದಿಪಡಿಸಿ ಕಕ್ಕರಗೋಳ ರಸ್ತೆಯನ್ನು ಸರಿಪಡಿಸಲಾಗುವುದು ಇದೆ ರೀತಿ ಬೆನ್ನೂರ, ಈಳಿಗನೂರ ಕ್ಯಾಂಪ್, ಜಮಾಪುರ, ಶಾಲಿಗನೂರ ಮತ್ತು ನಂದಿಹಳ್ಳಿ ಗ್ರಾಮಗಳಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಹಂತಹಂತವಾಗಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಸಚಿವರು ಗ್ರಾಮಸ್ಥರಿಗೆ ತಿಳಿಸಿದರು.
ಈ ವೇಳೆ ತಹಸೀಲ್ದಾರರಾದ ಕುಮಾರಸ್ವಾಮಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿದೇವಿ, ಸಿಡಿಪಿಓ ಪ್ರವೀಣ, ಕೃಷಿ ಸಹಾಯಕ ನಿರ್ದೇಶಕರಾದ ಸಂತೋಷ ಪಟ್ಟದಕಲ್, ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ವಿಭಾಗದ ಅಭಿಯಂತರರಾದ ವಿಜಯಕುಮಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಸೇರಿದಂತೆ ಇತರರು ಇದ್ದರು.
Comments are closed.