ಬಡವರಿಗಾಗಿ ಆಸ್ಪತ್ರೆ ಕಟ್ಟಿಸಿದ ಕೆ ಎಚ್ ಪಾಟೀಲ ಅವರ ಸಂಕಲ್ಪವು ಮಾದರಿಯಾಗಿದೆ: ಗವಿಶ್ರೀ

Get real time updates directly on you device, subscribe now.

ಗದಗ :  ಕಿಡ್ನಿ ಕಸಿಗಾಗಿ ತಾವು ಎದುರಿಸಿದ ತೊಂದರೆಯು ಬೇರೆ ಯಾರಿಗೂ ಬರಬಾರದು ಎಂದು ಯೋಚಿಸಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ಕಟ್ಟಿಸಿದ ಹುಲಕೋಟಿಯ ಕೆ ಎಚ್ ಪಾಟೀಲ ಅವರ ಸತ್ ಸಂಕಲ್ಪ ಇತರರಿಗೆ ಮಾದರಿಯಾಗಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ದಿ ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿಯ ಕೆ ಎಚ್ ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಹುಲಕೋಟಿಗೆ  ಭೇಟಿ ನೀಡಿ ಅವರು ಹಿತವಚನ ನೀಡಿದರು.
ಬಡವರು ಅಂದರೆ ದುಡ್ಡು ಇಲ್ಲದೇ ಇರೋರಲ್ಲ. ಒಳ್ಳೆಯ ಸಂಕಲ್ಪ ಇಲ್ಲದೇ ಇರುವವರು ಮಾತ್ರ ಬಡವರು. ಅಂದು ಕೆ‌ ಎಚ್ ಪಾಟೀಲ ಅವರು ಉತ್ತಮ ಸಂಕಲ್ಪ ಹೊಂದಿದ್ದರಿಂದಾಗಿ ನಿರ್ಮಾಣಗೊಂಡ ಈ ಆಸ್ಪತ್ರೆಯಿಂದ‌ ಕಡು ಬಡವರಿಗೆ ಕಿಡ್ನಿ ಕಸಿಗೆ ಅನುಕೂಲವಾಗಿದೆ. ಮನುಷ್ಯನಿಗೆ ಇಂತಹ ವಿಚಾರ, ಸತ್ ಸಂಕಲ್ಪ ಇರಬೇಕು ಎಂದು ಶ್ರೀಗಳು ಹೇಳಿದರು.
ಅಪಘಾತ ಸಂಭವಿಸಿ, ನಗರಕ್ಕೆ ತುರ್ತಾಗಿ ಕರೆದೊಯ್ಯಲು ಆಗದ್ದಕ್ಕೆ ತನ್ನ ಪತಿಯನ್ನು ಕಳೆದುಕೊಂಡ ಕಾಯಿಪಲ್ಲೆ ಮಾರುವ ಹೆಣ್ಣು ಮಗಳೊಬ್ಬಳು ತಾನು ಕಾಯಿಪಲ್ಲೇ ಮಾರಿದ ಅಲ್ಪ ಹಣ ಕೂಡಿಟ್ಟು ಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸುತ್ತಾಳೆ. ನನ್ನ ನೋವು ಬೇರೆಯವರು ಪಡಬಾರದು ಎಂದು ಆಸ್ಪತ್ರೆ ಕಟ್ಟಿಸಿದ ಅಂತಹ ಮಹಿಳೆಯ ಉತ್ತಮ ಗುಣವನ್ನು ನಾವುಗಳು ಹೊಂದಬೇಕು.
ಊಟ ಮಾಡುವಾಗ ಕಲ್ಲು ಬಂದರೆ ಅದನ್ನು ತೆಗೆದು ಊಟ ಮಾಡುತ್ತೇವೆ. ಅದರಂತೆ ಕನಸು ಕಟ್ಟುವಾಗ ನೂರಾರು ತೊಂದರೆಗಳು ಎದುರಾಗುತ್ತವೆ. ಅದನ್ನು ಎದುರಿಸಿ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು ಎಂದು ಗವಿಶ್ರೀ ಸಲಹೆ ಮಾಡಿದರು.
ಕ್ಯಾನ್ಸರದಿಂದ ಬಳಲುತ್ತಿದ್ದ
ರಮಣ ಮಹರ್ಷಿಗಳು ಉದುರುತ್ತಿದ್ದ ಹುಳುಗಳನ್ನು ಮತ್ತೆ ಕೈಗೆ ಹಾಕಿಕೊಂಡು ಅರಿಬಿ ಸುತ್ತುತ್ತಿದ್ದರು. ಸತ್ತರೆ ಈ ದೇಹ ಮಣ್ಣಾಗುತ್ತದೆ. ಬದುಕಿರುವ ತನಕ ಹುಳುಗಳಾದರು ನನ್ನ ದೇಹ ತಿಂದು ಬದುಕಲಿ ಎಂದು ಮಹರ್ಷಿಗಳು ಹೇಳುತ್ತಿದ್ದ ಮಾತುಗಳ ಹಿಂದಿನ ಭಾವನೆಯನ್ನು ನಾವು ಅರ್ಥೈಸಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.
ಪತ್ರಕರ್ತನ ಯೋಗಕ್ಷೇಮ ವಿಚರಣೆ: ಆಸ್ಪತ್ರೆಗೆ ಆಗಮಿಸಿದ ವೇಳೆ ಮೊದಲಿಗೆ ಆಸ್ಪತ್ರೆ ಅಂಗಳದಲ್ಲಿ ಸಸಿ ನೆಟ್ಟ ಶ್ರೀಗಳು, ಬಳಿಕ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡ ಪತ್ರಕರ್ತ ಕೊಪ್ಪಳ ಜಿಲ್ಲೆಯ ಹನುಮಂತ ಹಳ್ಳಿಕೇರಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ಕಿಡ್ನಿ ಕಸಿ ಮಾಡಿಕೊಂಡ ಇನ್ನೀತರರ ಯೋಗಕ್ಷೇಮ ವಿಚಾರಿಸಿದರು. ಬಹುವರ್ಷಗಳ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇದು ತಮಗೆ ಸಂತಷ ನೀಡಿದೆ ಎಂದು ಶ್ರೀಗಳು ತಿಳಿಸಿದರು.
ಈ ವೇಳೆ ಆಸ್ಪತ್ರೆಯ ವೈದ್ಯರಾದ ಅವಿನಾಶ ಓದುಗೌಡ್ರ, ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವೇಮನ, ಜಿಲ್ಲೆಯ ಪತ್ರಕರ್ತರಾದ ರಾಜು ಹೆಬ್ಬಳ್ಳಿ, ಶರಣು ಪಾಟೀಲ, ಸುರೇಶ, ಕೊಪ್ಪಳ ಜಿಲ್ಲೆಯ ಪತ್ರಕರ್ತರಾದ ಹರೀಶ್ ಹೆಚ್ ಎಸ್., ಸಂತೋಷ ದೇಶಪಾಂಡೆ, ಮೌಲಾಹುಸೇನ್ ಬುಲ್ಡಿಯಾರ್ ಸೇರಿದಂತೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!