ಎಡಗಾಲಿನ ತೊಡೆಗೆ ಗಡ್ಡೆಯಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಏಳು ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಕೊಪ್ಪಳದ ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರು ಬಾಲಕಿಯ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಕುಷ್ಟಗಿ ಪಟ್ಟಣದ ಏಳು ವರ್ಷದ ಬಾಲಿ ಎಡಗಾಲಿನ ಹಿಂಬದಿಯಲ್ಲಿ ಉಂಟಾದ ಗಡ್ಡೆಯಿಂದಾಗಿ ಸುಮಾರು ಒಂದು ವರ್ಷದಿಂದ ಬಳಲುತ್ತಿದ್ದಳು. ಇದರಿಂದಾಗಿ ಕಾಲಿನಲ್ಲಿ ಶಕ್ತಿ ಕ್ರಮೇಣ ಕಡಿಮೆಯಾಗುತ್ತಿತ್ತು. ಬಾಲಕಿಯ ಪಾಲಕರು ಹುಬ್ಬಳ್ಳಿ, ಧಾರವಾಡದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ತೋರಿಸಿ, ಎಲ್ಲ ಬಗೆಯ ತಪಾಸಣೆ ಮಾಡಿಸಿದ್ದರು. ಈ ಗಡ್ಡೆಯು ಬಾಲಕಿ ತೊಡೆಯ ಎಲುಬಿಗೆ ಸೇರಿಕೊಂಡಿದ್ದರಿಂದ ಶಸ್ತ್ರ ಚಿಕಿತ್ಸೆ ಕಷ್ಟ ಸಾಧ್ಯ ಎಂದು ಅಲ್ಲಿನ ವೈದ್ಯರು ಸಾಗಹಾಕಿದರು. ಬಾಲಕಿಯ ಮನೆಯವರು ಕೊನೆಗೆ ದಾರಿ ಕಾಣದಂತಾಗಿ, ಕೊಪ್ಪಳದ ವೈದ್ಯಕೀಯ ಕಾಲೇಜಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಕೊಪ್ಪಳ ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ. ಶಂಕರ ಮಲಪುರೆ ಅವರು, ಶಸ್ತ್ರ ಚಿಕಿತ್ಸಕರು, ಹಾಗೂ ಶಸ್ತ್ರ ಚಿಕಿತ್ಸೆ ವಿಭಾಗದ ತಮ್ಮ ಸಹೋದ್ಯೋಗಿಗಳೊಡನೆ ಬಾಲಕಿಗಿರುವ ತೊಂದರೆ ಕುರಿತು ಚರ್ಚಿಸಿದರು. ಈ ಮೊದಲೆ ಗಡ್ಡೆಯ ತುಂಡನ್ನು ಮೂರು ನಾಲ್ಕು ಬಾರಿ ತಪಾಸಣೆ ನಡೆಸಿದ್ದರೂ, ಕಾಯಿಲೆಯ ನಿಖರವಾದ ಕಾರಣ ಪತ್ತೆಯಾಗಿರಲಿಲ್ಲ. ಶಸ್ತ್ರ ಚಿಕಿತ್ಸೆಯ ಸಾಧಕ-ಬಾಧಕಗಳನ್ನು ಚರ್ಚಿಸಿ, ಅರವಳಿಕೆ ತಜ್ಞ ಡಾ. ಶ್ರೀನಿವಾಸ್, ರೋಗನಿದಾನ ತಜ್ಞ ಡಾ. ಅನಿರುದ್ಧ ಕುಷ್ಟಗಿ ಅವರೊಂದಿಗೆ ಚರ್ಚಿಸಿ, ಬಾಲಕಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು. ಗೆಡ್ಡೆಯು ಕಾಲಿನ ಮುಖ್ಯ ನರಕ್ಕೆ ಹತ್ತಿಕೊಂಡಿದ್ದರಿಂದ, ಕೌಶಲ್ಯಪೂರ್ಣ ಚಿಕಿತ್ಸೆಯೊಂದಿಗೆ ಸಂಪೂರ್ಣ ಗೆಡ್ಡೆಯನ್ನು ಬೇರ್ಪಡೆಸಲಾಯಿತು. ಗೆಡ್ಡೆಯ ಗುಣಧರ್ಮವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಅದು, ಕ್ಯಾನ್ಸರ್ ಅಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಲಾಯಿತು.
ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ಗುಣಮುಖಳಾಗಿ, ಬಾಲಕಿಯ ಕಾಲಿನಲ್ಲಿ ಶಕ್ತಿ ಬಂದಿದ್ದನ್ನು ಕಂಡ ಪಾಲಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಟ್ಟಾರೆ ಕಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡು, ಬಾಲಕಿಯ ಮುಖದಲ್ಲಿ ಮಂದಹಾಸ ಮೂಡಿಸಿದ ಕೊಪ್ಪಳ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರ ಉತ್ತಮ ಕಾರ್ಯ ಅಭಿನಂದನೆಗೆ ಅರ್ಹವಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಸಾಧನೆ : ಬಡ ಕುಟುಂಬದ ಬಾಲಕಿಯ ವಿಚಿತ್ರ ಗಡ್ಡೆ ತೊಂದರೆಗೆ ಯಶಸ್ವಿ ಚಿಕಿತ್ಸೆ
Please follow and like us: