ಕೊಪ್ಪಳ :ಜೀವನದಲ್ಲಿ ಅನುಭವಿಸುವುದಕ್ಕಿಂತ ಅಭಿನಯಿಸುತ್ತಿದ್ದೇವೆ. ಇದರಿಂದ ಏನು ಪ್ರಯೋಜವಾಗುವುದಿಲ್ಲ. ಆಡುವುದು ಒಂದಾದರೇ ಮಾಡುವುದು ಮತ್ತೊಂದು. ಆದ್ದರಿಂದ ಪ್ರತಿಯೊಬ್ಬರು ಭಗವದ್ಗೀತೆಯನ್ನು ಪಠಿಸಿದರೇ ಸಾಲದು, ಅದನ್ನು ಅನುಸರಿಸಬೇಕು ಎಂದು ಅವದೂತ ಶ್ರೀ ವಿನಯಗುರೂಜಿ ಹೇಳಿದ್ದಾರೆ.
ಕೊಪ್ಪಳ ತಾಲೂಕನ ಕಿಡದಾಳ ಗ್ರಾಮದಲ್ಲಿರುವ ಶಾರದ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶ ಮಮ್ಮಿ, ಡ್ಯಾಡಿ ಸಂಸ್ಕೃತಿಯಿಂದ ಹಾಳಾಗುತ್ತಿದೆ. ಶಾಲೆಗಳಲ್ಲಿ ನಾವು ಬದುಕು ಕಲಿಸುತ್ತಿಲ್ಲ, ಸಂಸ್ಕಾರ ಕಲಿಸುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಇದರಿಂದ ಕಲಿಯುವ ಮಕ್ಕಳು ತಪ್ಪಾಗಿ ಬದುಕು ಸಾಗಿಸಲು ನಿರ್ಧರಿಸುತ್ತಾರೆ. ಆದ್ದರಿಂದ ಅವರಿಗೆ ನಾವು ಸಂಸ್ಕಾರ ಕೊಡಬೇಕಾಗಿದೆ. ಪ್ರತಿಯೊಂದು ಶಾಲೆಯಲ್ಲಿಯೂ ಭಗವದ್ಗೀತೆಯ ಪಾಠವಾಗಬೇಕಾಗಿದೆ. ದಿನಾಲೂ ಅರ್ಧರ್ಗಂಟೆ ಅದನ್ನು ಪಠಣ ಮಾಡುವುದು ಮತ್ತು ಅನುಸರಿಸುವುದನ್ನು ಮಕ್ಕಳಿಗೆ ಕಲಿಸಿಕೊಡುವ ಅಗತ್ಯವಾಗಿದೆ.
ಭಾರತ ನಿರ್ಮಾಣವಾಗಿರುವುದು ಕಾಸು, ಬಂಗಾರ, ವಜ್ರದಿಂದ ಅಲ್ಲ. ಇದು ನಿರ್ಮಾಣವಾಗಿರುವುದು ಸಂಸ್ಕಾರದಿಂದ. ಆದ್ದರಿಂದ ಆ ಸಂಸ್ಕಾರವನ್ನು ನಾವು ಮಕ್ಕಳಿಗೆ ಕಲಿಸಬೇಕಾಗಿದೆ ಎಂದರು.
ದುಡ್ಡು ಮಾಡುವುದು ದೊಡ್ಡದಲ್ಲ, ಮಾಡಿದ ದುಡ್ಡನ್ನು ಸಂಸ್ಕಾರಯುತವಾಗಿ ಹೇಗೆ ಬಳಕೆ ಮಾಡಬೇಕು ಎನ್ನುವುದು ಮುಖ್ಯ. ಕಲ್ಲು ದೇವರಿಗೆ ಅರ್ಧ ಕೆಜಿ ತುಪ್ಪ ಸುರಿಯುವ ಬದಲು ಕೆರೆಯೊಂದರ ಮಕ್ಕಳಿಗೆ ಆ ತುಪ್ಪ ನೀಡಿದರೇ ಅದುವೇ ಸಂಸ್ಕಾರ. ಆದರೆ, ನಾವು ಅದನ್ನು ಮಾಡುತ್ತಿಲ್ಲ. ಸಂಸ್ಕಾರ ನೀಡುವಾಗಲು ತಾರತಮ್ಯ ಮಾಡಲಾಗುತ್ತದೆ.ಇದು ಅತ್ಯಂದ ದುರ್ಗತಿ ಎಂದರು.
ಯಾವ ದೇವರು ಸಹ ನಮಗೆ ಬಂಗಾರದ ಕಳಸ ಮಾಡಿಸಿ, ಗೋಪುರ ಕಟ್ಟಿಕೊಡಿ ಎಂದು ಕೇಳಿಲ್ಲ. ನೀವು ಮಾಡುವ ತಪ್ಪಿನಿಂದಾಗಿ ಇಂದು ದೇವರ ಬಗ್ಗೆ ತಪ್ಪು ಕಲ್ಪನೆ ಮೂಡಿದೆ. ಯಾವ ದೇವರು ಸಹ ಇದನ್ನು ಕೊಡಿ ಎಂದು ಕೇಳುವುದೇ ಇಲ್ಲ. ಇದನ್ನು ಭಗವದ್ಗೀತೆ ಹೇಳುತ್ತದೆ. ಆದರೆ, ನಾವು ಅದನ್ನು ಅನುಸರಿಸುವುದಿಲ್ಲ. ಅದನ್ನು ತಪ್ಪಾಗಿ ಅರ್ಥೈಸಿ, ತಪ್ಪು ಸಂದೇಶ ನೀಡುತ್ತಿದ್ದೇವೆ ಎಂದರು.
ಇನ್ನು ಉತ್ತರ ಕರ್ನಾಟಕದಲ್ಲಿ ಇಂದಿಗೂ ದಾಸೋಹ ಪರಂಪರೆ ಇದೆ. ಇದರಿಂದ ಇಲ್ಲಿ ದೇವರು ನೆಲೆಸಿದ್ದಾನೆ. ಇಂಥ ದಾಸೋಹ ಪರಂಪರೆ ತೀರಾ ಅಗತ್ಯವಾಗಿದೆ. ನಿಮ್ಮ ದುಡಿಮೆಯಲ್ಲಿ ಒಂದಿಷ್ಟು ಪಾಲನ್ನು ದಾಸೋಹ ಅಥವಾ ಬಡ ಮಕ್ಕಳ ಕಲ್ಯಾಣಕ್ಕೆ ಮೀಸಲು ಇಟ್ಟರೇ ಅದುವೇ ಮಾಡುವ ದೇವರ ಸೇವೆ. ಇದನ್ನು ಅರ್ಥಮಾಡಿಕೊಂಡರೇ ಖಂಡಿತ ದೇಶವೂ ಸಂಸ್ಕಾರಯುತವಾಗಿರುತ್ತದೆ ಮತ್ತು ಮನಸ್ಸು ನೆಮ್ಮದಿಯಾಗಿರುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಚಕ್ರವರ್ತಿ ಅವರು ಶ್ರೀ ವಿನಯ ಗುರೂಜಿ ಅವರು ಪರಿಚಯಿಸಿದರು.
ಆಡಳಿತ ಮಂಡಳಿಯ ಸಂಸ್ಥಾಪಕರಾದ ವಿ.ಆರ್. ಪಾಟೀಲ್, ಎಸ್. ಆರ್. ಪಾಟೀಲ್, ಹಾಗೂ ಆಡಳಿತ ಮಂಡಳಿ ಸದಸ್ಯರು, ಶಾಲಾ, ಕಾಲೇಜು ಶಿಕ್ಷಕರು, ಉಪನ್ಯಾಸಕರು ಇದ್ದರು. ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಭಗವದ್ಗೀತೆ ಪಠಿಸಿದರೇ ಸಾಲದು, ಅನುಸರಿಸಬೇಕು : ವಿನಯಗುರೂಜಿ
Please follow and like us: