Kannadanet NEWS ಕೊಪ್ಪಳ: ಕೋವಿಡ್-19 ಮಾರ್ಗಸೂಚಿ ಲೆಕ್ಕಿಸದೇ ದೇವರ ಅಡ್ಡಪಲ್ಲಕ್ಕಿ ಉತ್ಸವದ ಹೆಸರಿನಲ್ಲಿ ಪೊಲೀಸ್ ಜೀಪ್ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಟಿಹಾಳ ಹಾಗೂ ಸುತ್ತಮುತ್ತಲಿನ 50 ಜನರ ವಿರುದ್ಧ ಕುಷ್ಟಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶುಕಮುನಿ ತಾತನವರ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ರಾತ್ರಿ ನಡೆಯಬೇಕಿತ್ತು. ಈ ಬಗ್ಗೆ ಜಿಲ್ಲಾಡಳಿತ ಅದ್ಧೂರಿ ಉತ್ಸವದ ಬದಲಾಗಿ ಸಾಂಪ್ರದಾಯಿಕವಾಗಿ ಆಚರಿಸುವಂತೆ ಸಲಹೆ ನೀಡಿತ್ತು. ಆ ಪ್ರಕಾರ ಪಲ್ಲಕ್ಕಿ ಇರುವ ಸ್ಥಳವನ್ನು ಬೀಗ ಹಾಕಿ ಅರ್ಚಕರಿಗೆ ವಿಧಿ ವಿಧಾನ ನೆರವೇರಿಸಲು ಅವಕಾಶ ನೀಡಲಾಗಿತ್ತು. ಈ ವೇಳೆ ಒಳಪ್ರವೇಶಿಸಿದ ಸುಮಾರು 50 ಜನರು ಪಲ್ಲಕ್ಕಿಯನ್ನು ಹೊತ್ತು, ಮುಚ್ಚಲಾಗಿದ್ದ ಗೇಟ್ನ್ನು ಪಲ್ಲಕ್ಕಿಯಿಂದಲೇ ಮುರಿದಿದ್ದಾರೆ. ಎದುರುಗಿದ್ದ ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದಾರೆ. ಪೊಲೀಸರೆದುರಿಗೆ ಈ ಘಟನೆ ನಡೆದಿದ್ದು, ಪೊಲೀಸರು ನೀಡಿದ ಯಾವ ಎಚ್ಚರಿಕೆಯನ್ನು ಪಲ್ಲಕ್ಕಿ ಹೊತ್ತವರು ಕೇಳಲಿಲ್ಲ ಎನ್ನಲಾಗಿದೆ.
ತಡರಾತ್ರಿ ಕೊಪ್ಪಳ ಎಸ್ಪಿ ಜಿ.ಸಂಗೀತಾ ಸ್ಥಳಕ್ಕೆ ಭೇಟಿ, ಘಟನೆಯ ವಿಡಿಯೊ ದೃಶ್ಯ ಹಾಗೂ ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಸುಮಾರು 50 ಜನರನ್ನು ಕಂಬಿ ಹಿಂದೆ ಹಾಕಿದ್ದು, ಎಫ್ಐಆರ್ ದಾಖಲಿಸಲಾಗಿದೆ.