Kannadanet NEWS
“ಸಾಕಷ್ಟು ಮುಂಚಿತವಾಗಿಯೇ ನಡೆಯಬೇಕಿದ್ದ ನೀಟ್ ಯುಜಿ ಮತ್ತು ನೀಟ್ ಪಿಜಿ ಕೌನ್ಸೆಲಿಂಗ್ನಲ್ಲಿ ಅನಗತ್ಯ ಮತ್ತು ಅಸಮಂಜಸ ವಿಳಂಬ ಆಗುತ್ತಿರುವುದನ್ನು ಎಐಡಿಎಸ್ಓ ಬಲವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಈ ವಿಳಂಬದ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರದ್ದೇ ಆಗಿದೆ. ಸರ್ಕಾರದ ಈ ತಾತ್ಸಾರ ಧೋರಣೆಯಿಂದ ಉಂಟಾಗಿರುವ ಅನಿಶ್ಚಿತತೆಯು, ಅರ್ಹತೆ ಪಡೆದ ನೀಟ್ ಅಭ್ಯರ್ಥಿಗಳನ್ನು ತೀವ್ರ ಬಿಕ್ಕಟ್ಟಿಗೆ ದೂಡಿದೆ. ಈ ಅನಗತ್ಯ ವಿಳಂಬದಿಂದ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷದಷ್ಟು ಅಮೂಲ್ಯ ಸಮಯ ನಷ್ಟವಾಗಲಿದ್ದು, ನೀಟ್ ಪಿಜಿಯಲ್ಲಿ ಉತ್ತೀರ್ಣರಾಗಿ ಒಂದು ವರ್ಷದಿಂದ ಕಾಯುತ್ತಿರುವ ಅಸಂಖ್ಯಾತ ಅಭ್ಯರ್ಥಿಗಳು ತೊಂದರೆ ಅನುಭವಿಸಲಿದ್ದಾರೆ. ಅಷ್ಟೇ ಅಲ್ಲದೇ, ಒಂದೆಡೆ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳೇ ದಾಖಲಾಗದ ಕಾರಣ, ಆಸ್ಪತ್ರೆಗಳಲ್ಲಿ ಹೊಸ ಬ್ಯಾಚ್ಗಳಿಲ್ಲದೇ, ತೀವ್ರ ಮಾನವ ಸಂಪನ್ಮೂಲ ಬಿಕ್ಕಟ್ಟು ಎದುರಾಗಿದೆ. ಅದರ ಫಲವಾಗಿ, ರೆಸಿಡೆಂಟ್ ಡಾಕ್ಟರ್ಗಳಿಗೆ, ಅದರಲ್ಲೂ ಜೂನಿಯರ್ ರೆಸಿಡೆಂಟ್ ಡಾಕ್ಟರ್ಗಳಿಗೆ ಅನಗತ್ಯ ಹೊರೆ ಬೀಳುತ್ತಿದೆ.
ಅಸಮರ್ಪಕ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯ ಕೊರತೆಯಿಂದ, ಸರ್ಕಾರಿ ಆರೋಗ್ಯ ವ್ಯವಸ್ಥೆ ಈಗಾಗಲೇ ನೆಲಕಚ್ಚುತ್ತಿದೆ. ತೃತೀಯ ಹಂತದ ಭೋದನಾ ಆಸ್ಪತ್ರೆಗಳಿಗೆ ಈಗ ರೆಸಿಡೆಂಟ್ ಡಾಕ್ಟರ್ಗಳೇ ಆಧಾರಸ್ಥಂಭವಾಗಿದ್ದು, ಸಂಪನ್ಮೂಲ ಕೊರತೆಯ ನಡುವೆಯೇ ಅವರು ಜನಸಾಮಾನ್ಯರಿಗೆ ಅತ್ಯಗತ್ಯ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಆದರೆ ಹೊಸ ಬ್ಯಾಚ್ಗಳು ಮತ್ತು ಮೂಲಸೌಕರ್ಯದ ಕೊರತೆಯಿಂದಾಗಿ, ಅವರ ಹೆಗಲ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಒಮಿಕ್ರಾನ್ನ ಆತಂಕ ಹೊಸಿಲ ಬಳಿಯೇ ಕಾದು ಕುಳಿತಿರುವ ಈ ಸಂದರ್ಭದಲ್ಲಿ, ಸೂಕ್ತ ಏರ್ಪಾಟು ಮಾಡದಿದ್ದರೆ, ಕೊರೋನಾ ಎರಡನೇ ಅಲೆಯಲ್ಲಿ ನೋಡಿದ ರೀತಿಯಲ್ಲಿಯೇ, ನಮ್ಮ ಇಡೀ ಆರೋಗ್ಯ ವ್ಯವಸ್ಥೆ ನೆಲಕಚ್ಚಲಿದೆ.
ಕೌನ್ಸೆಲಿಂಗ್ನ ಅನಗತ್ಯ ವಿಳಂಬವನ್ನು ದೆಹಲಿ ಸೇರಿದಂತೆ ಹಲವಾರು ರಾಜ್ಯಗಳ ರೆಸಿಡೆಂಟ್ ಡಾಕ್ಟರ್ಗಳು ಪ್ರತಿಭಟಿಸಿದ್ದಾರೆ. ಎಐಡಿಎಸ್ ಓ ಅವರ ಹೋರಾಟಕ್ಕೆ ಬೆಂಬಲ ನೀಡಿತ್ತು. ಇದರ ವಿರುದ್ಧ ದೇಶಾದ್ಯಂತ ಹೋರಾಟಗಳು ಭುಗಿಲೇಳುತ್ತಿದ್ದರೂ, ಕೇಂದ್ರ ಸರ್ಕಾರ ಈ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಮತ್ತೆ ಪ್ರತಿಭಟನೆಗಳು ಶುರುವಾಗಿ, ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾದರೆ, ಅದರ ಸಂಪೂರ್ಣ ಹೊಣೆ ಸರ್ಕಾರದ್ದೇ ಆಗಿರುತ್ತದೆ.
ಈ ಕೂಡಲೇ ಕೌನ್ಸೆಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿ, ಬಿಕ್ಕಟ್ಟನ್ನು ಬಗೆಹರಿಸಬೇಕೆಂದು ನಾವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ. ಈ ನಿಟ್ಟಿನಲ್ಲಿ ಪ್ರಬಲ ಹೋರಾಟ ಕಟ್ಟಲು ಮುಂದಾಗಬೇಕೆಂದು ದೇಶದ ವಿದ್ಯಾರ್ಥಿ ಸಮುದಾಯ, ಚಿಂತಕರು, ಜನಸಾಮಾನ್ಯರು ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.