ಗಂಗಾವತಿ: ಅನ್ನಭಾಗ್ಯ ಯೋಜನೆಯಲ್ಲಿ ಸರಕಾರ ಬಡ ಫಲಾನುಭವಿಗಳಿಗೆ ಎಂದು ವಿತರಿಸಿದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದಲ್ಲಿ ಒಟ್ಟು ಏಳುಕಡೆ ದಾಳಿ ಮಾಡಿದೆ.

ಪ್ರಭಾವಿಗಳಿಗೆ ಸೇರಿದ್ದ ರೈಸ್ ಮಿಲ್, ಗೋದಾಮು, ಟ್ರೆಡಿಂಗ್ ಕಂಪನಿ ಸೇರದಂತೆ ಇನ್ನಿತರ ಕಡೆಗಳಲ್ಲಿ ದಾಳಿ ಮಾಡಿದ ಅಧಿಕಾರಿಗಳು ಮೂರು ಲಾರಿ ಸೇರಿದಂತೆ ಒಟ್ಟು ನೂರಾರು ಟನ್ ಅಕ್ಕಿಯನ್ನು ವಶಪಡಿಸಿಕೊಂಡಿದೆ.
ಇಲ್ಲಿನ ಶರಣಬಸವೇಶ್ವರ ಕ್ಯಾಂಪ್, ಕಿಲ್ಲಾ ಏರಿಯಾದಲ್ಲಿ ಮನೆಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ದಾಳಿ ಮುಂದುವರೆದಿದ್ದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ದಾಳಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ನೇತೃತ್ವವಹಿಸಿದರೆ, ಜಿಲ್ಲಾ ಟಿ. ಎಸ್ಪಿ ಶ್ರೀಧರ, ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ, ಆಹಾರ ಇಲಾಖೆಯ ಉಪ ನಿರ್ದೆಶಕ ಶಾಂತನಗೌಡ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.



